ಏಪ್ರಿಲ್ 02, 2021

ಕಲಬುರಗಿಯ ಆರಾಧ್ಯದೈವ ಶ್ರೀ ಶರಣಬಸವೇಶ್ವರರು

 

ಕಲ್ಯಾಣ ನಾಡಿನ ಕಾರುಣ್ಯನಿಧಿ, ಶರಣರ ಬೀಡಿನ ತವನಿಧಿ, ಭಕ್ತರ ಪಾಲಿನ ಸರ್ವಶಕ್ತ, ಬೇಡಿ ಬಂದವರ ಆಶ್ರಯದಾತ. ಈ ಬೀಡು ಹಸಿದು-ದಣಿದು ಬಂದವರಿಗೆ ಮಡಿಲು. ಮಹಾದಾಸೋಹಪೀಠದಲ್ಲಿ ಸರ್ವಸ್ವವನ್ನು ಕಂಡಿರುವ ಕಲಬುರಗಿಯ ಗ್ರಾಮದೈವ ಶ್ರೀ ಶರಣಬಸವೇಶ್ವರ. ಇಂದು ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವ. ನಾಡಿನ ಸಮಸ್ತ ಶರಣ ಭಕ್ತರಿಗೆ ಹಾರ್ದಿಕ ಶುಭಾಶಯಗಳು.

ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (02-04-2021) ಮಧ್ಯಾಹ್ನ 1:30ರ ಹೊತ್ತಿಗೆ ಜರುಗಿದ ಭವ್ಯ ರಥೋತ್ಸವದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

ಮೂಲತಃ ಕಲಬುರಗಿ ಜಿಲ್ಲೆ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯಲ್ಲಿ ಶರಣಬಸವೇಶ್ವರರು ಕ್ರಿ.. 1746 ರಲ್ಲಿ ಭಾಗದ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸಲು ಜನ್ಮವೆತ್ತುತ್ತಾರೆ. ಅಲ್ಲಿಂದ ಅವರು ಕಲಬುರಗಿಗೆ ಬಂದು ನೆಲೆ ನಿಂತು ಅದನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆಯುತ್ತಾರೆ. ಮುಂದೇ ಇಲ್ಲಿಯೇ 1822 ಮಾರ್ಚ್ ತಿಂಗಳ 11 ಸೋಮವಾರದಂದು ಲಿಂಗೈಕ್ಯರಾಗುತ್ತಾರೆ. ಶರಣಬಸವೇಶ್ವರರ ಸಮಾಧಿಯ ಸ್ಥಳದಲ್ಲಿಯೇ ನಂತರದಲ್ಲಿ ಗೋಪುರ ರಚಿಸಿದ್ದು ಅದುವೇ ಕಲಬುರಗಿಯ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ತಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ್ಷವೂ ಬಹು ವಿಜೃಂಭಣೆಯಿಂದ ರಥೋತ್ಸವವನ್ನು ನಡೆಸಲಾಗುತ್ತದೆ.

ಶರಣ ಬಸವೇಶ್ವರರಿಗೆ ಕಲ್ಬುರ್ಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು. ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೇ ಭಕ್ತರ ಆರಾಧನಾ ಬಿಂದುವಾಗಿದೆ.

ದೇವಸ್ಥಾನ ಭಾರತಿಯ ಮತ್ತು ಆರೆಬಿಕ್ ಮಿಶ್ರ ಶೈಲಿಯಲ್ಲಿ ನಿರ್ಮಿಸಲಾಗಿದ್ದು ವಿಶಾಲವಾದ ಸಭಾ ಮಂಟಪ ಹೊಂದಿದೆ. ಪ್ರದಕ್ಷಿಣಾ ಪಥವೂ ಇದೆ. ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ 36 ಕಮಾನುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದನ್ನು ವಿಶಿಷ್ಟ ಹೂ ಬಳ್ಳಿಗಳಿಂದ ನಿರ್ಮಿಸಿದ್ದು, ಛಾವಣಿಯೂ ವಿಶಿಷ್ಟವಾಗಿದೆ. ಶ್ರಾವಣ ಮಾಸದಲ್ಲಿ ನಡುವಿನ ಸೋಮವಾರದಂದು ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಅಂದು ಸಾವಿರಾರು ಜನ ಬಂದು ಶರಣನ ದರ್ಶನಾಶೀರ್ವಾದ ಪಡೆಯುತ್ತಾರೆ.

ಸುಮಾರು 17 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನದಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಉತ್ಸವದಲ್ಲಿ ಶ್ರೀ ಶರಣಬಸವೇಶ್ವರರ ದಿವ್ಯಬಿಂಬಗಳಿರುವ ಅವಳಿ ವಿಗ್ರಹವನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಭವ್ಯ ಮೆರವಣಿಗೆಯಲ್ಲಿ ನಂದಿಕೋಲುಗಳ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ ಭಜನಾ ತಂಡದವರಿಂದ ಭಜನೆ ನಡೆಯುತ್ತದೆ. ಅಡ್ಡಪಲ್ಲಕಿಯಲ್ಲಿ ದೇವಸ್ತಾನದ ಸುತ್ತ 5 ಸುತ್ತುಗಳನ್ನು ಹಾಕಲಾಗುತ್ತದೆ. ಉತ್ಸವದಲ್ಲಿ ಸಾವಿರಾರು ಭಕ್ತರು ಶ್ರದ್ದೆಯಿಂದ ಪಾಲ್ಗೊಳ್ಳುತ್ತಾರೆ.

ಎರಡನೇ ದಿನ ಶ್ರೀ ಶರಣಬಸವೇಶ್ವರರ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ. ದಿನದಂದು ಬೆಳಿಗ್ಗೆ ಶ್ರೀ ಶರಣಬಸವೇಶ್ವರರಿಗೆ ವಿಶೇಶವಾದ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ. ಶರಣಬಸವೇಶ್ವರ ಸಂಸ್ತಾನದ ಪೀಠಾಧಿಪತಿಗಳು ಪೂಜೆ ಸಲ್ಲಿಸಿ ಪರುಶ ಬಟ್ಟಲು ತೋರಿಸುವ ಮೂಲಕ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.

ಜಾತ್ರೆಯ ಪ್ರತಿದಿನವೂ ದೇವಸ್ತಾನದ ಸಂಕೀರ್ಣದಲ್ಲಿರುವ ಅನುಭವ ಮಂಟಪದಲ್ಲಿ ವಿಶೇಷ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಕುರಿತು ಗೋಷ್ಠಿ, ಸಂವಾದ, ವಿಚಾರ ಮಂಥನ ಹಾಗು ಇನ್ನಿತರ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಇನ್ನೊಂದು ಕಡೆ ಹಲವಾರು ಊರುಗಳಿಂದ ಬಂದಿರುವ ಭಜನಾ ತಂಡಗಳಿಂದ ರಾತ್ರಿಯಿಡೀ ಶರಣಬಸವೇಶ್ವರರ ಭಜನೆ ಹಾಗೂ ಕೀರ್ತನೆಗಳ ಮೂಲಕ ಆರಾಧನೆ ಮಾಡಲಾಗುತ್ತದೆ.

ಜಾತ್ರೆಯಲ್ಲಿ ಸಿಹಿತಿಂಡಿ, ಬಳೆ, ಮಕ್ಕಳ ಆಟಿಕೆ ಹಾಗೂ ಇನ್ನೂ ಹಲವಾರು ಬಗೆಯ ಮಳಿಗೆಗಳನ್ನು ಹಾಕುತ್ತಾರೆ. ಇದರ ಜೊತೆಯಲ್ಲಿಯೇ ವಿವಿಧ ಬಗೆಯ ಜೋಕಾಲಿಗಳು, ಸರ್ಕಸ್ ಬರುತ್ತವೆ. ಎಲ್ಲವೂ ಸೇರಿ ಹದಿನೈದು ದಿನಗಳ ಜಾತ್ರೆಯನ್ನು ಕಳೆಗಟ್ಟಿಸುತ್ತವೆ.

ಸಾವಿರಾರು ಭಕ್ತರು ಜೈ ಘೋಶವನ್ನು ಹಾಕುತ್ತಾ ಭಕ್ತಿಯಿಂದ ತೇರನ್ನು ಎಳೆಯುತ್ತಾರೆ. ತೇರು ಸಾಗುವ ಹಾದಿಯಲ್ಲಿ ಮತ್ತು ತೇರಿಗೆ ಖಾರಿಕು-ನಾರು, ಹೂವು-ಹಣ್ಣುಗಳನ್ನು ಮೇಲೆ ಹಾರಿಸುತ್ತ, ಜೈ ಘೋಶವನ್ನು ಮೊಳಗಿಸುತ್ತಾ ಭಕ್ತಿಯ ಅಲೆಯಲ್ಲಿ ಮೀಯುತ್ತಾರೆ. ಹೀಗೆ ಸಾಗುವ ತೇರು ಶರಣಬಸವೇಶ್ವರರ ದೇವಸ್ತಾನದ ಸಂಕೀರ್ಣದಲ್ಲಿ ಸುಮಾರು 100 ಮೀಟರ್ ದೂರದಲ್ಲಿರುವ ಬಸವಣ್ಣನ ಗುಡಿಯವರಿಗೂ ತಲುಪಿ ಮತ್ತೆ ದೇವಸ್ತಾನದ ಕಡೆಗೆ ಹಿಂತಿರುಗುತ್ತದೆ. ಉಳಿದ ಹದಿಮೂರು ದಿನಗಳ ಕಾಲ ಜಾತ್ರೆಯ ಮೆರೆಗು ಹಾಗೆಯೇ ಇರುತ್ತದೆ.


ಜಾತ್ರೆಗೆ ಕಲಬುರಗಿ ಜಿಲ್ಲೆಯಿಂದಲ್ಲದೇ ನೆರೆಯ ಜಿಲ್ಲೆಗಳಿಂದ ಹಾಗೂ ಹೊರ ನಾಡಿನಿಂದಲೂ ಬರುತ್ತಾರೆ. ಹಳ್ಳಿಗಳಿಂದ ದೂರದ ಊರುಗಳಿಂದ ಭಕ್ತರು ಭಜನೆ ಮಾಡುತ್ತಾ ಕಾಲ್ನಡಿಗೆಯಲ್ಲಿಯೇ ಆಗಮಿಸುತ್ತಾರೆ. ಅವರು ಬರುವ ದಾರಿಯಲ್ಲಿ ಸಿಗುವ ಊರುಗಳಲ್ಲಿ ಜನರನ್ನು ಭೇಟಿಮಾಡಿ, ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ದಾರಿಯಲ್ಲಿ ಅನ್ನ ದಾಸೋಹದ ಏರ್ಪಾಡನ್ನು ದೇವಸ್ತಾನದ ಕಡೆಯಿಂದ ಹಾಗೂ ಅಕ್ಕಪಕ್ಕದ ಊರಿನವರು ಮಾಡಿರುತ್ತಾರೆ.

ಇನ್ನುಈ ಭಾಗದ ಭಕ್ತರು ಈಗಲೂ ಸಹ ತಮ್ಮ ಹೊಲದಲ್ಲಿ ಮಾಡಿದ ರಾಶಿಯಲ್ಲಿ ಒಂದಿಷ್ಟು ಭಾಗವನ್ನು ಶರಣಬಸವೇಶ್ವರರ ದಾಸೋಹಕ್ಕೆ ನೀಡಿ, ಅವರ ದಾಸೋಹ ಕಾಯಕಕ್ಕೆ ಕೈಜೋಡಿಸಿ ಪುನೀತರಾಗುತ್ತಾರೆ.

ಇನ್ನು ಶರಣಬಸವೇಶ್ವರರ ಹುಟ್ಟಿದ ಊರು ಅರಳಗುಂಡಗಿಯಲ್ಲಿಯೂ ಇದೇ ಮಾದರಿಯಲ್ಲಿ 5 ದಿನಗಳ ಕಾಲ ಜಾತ್ರೆ ನಡೆಯುತ್ತದೆ.

ಶ್ರಾವಣ ಮಾಸ ಪೂರ್ತಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಸೋಮವಾರ ಶರಣಬಸವೇಶ್ವರರ ವಾರವಾಗಿರುವುದರಿಂದ ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ವಿಶೇಷವಾಗಿ 3ನೇ ಸೋಮವಾರದಂದು ರಾಜ್ಯ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣದಿಂದಲೂ ಭಕ್ತರು ಬರುತ್ತಾರೆ. ಅದೆಷ್ಟೋ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಲಬುರಗಿಯ ಶರಣರ ದರ್ಶನ ಪಡೆಯುತ್ತಾರೆ.

ಕಳೆದ ಬಾರಿ ಮತ್ತು ಬಾರಿಯೂ ಕೊರೋನಾ ಮಹಾಮಾರಿಯಿಂದಾಗಿ ಭಕ್ತರ ದರ್ಶನಕ್ಕೆ ಮತ್ತು ಪಾಲ್ಗೊಳ್ಳುವಿಕೆಗೆ ತಡೆ ಹಾಕಿರುವುದರಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಶರಣನನ್ನು ನೆನದು ಜಾತ್ರಾ ಮಹೋತ್ಸವ ಮುಗಿಸಲಾಗುತ್ತಿದೆ. ಮುಂದಿನ ಬಾರಿಯಾದರೂ ಶರಣ ಕೋರೋನಾ ನಿರ್ನಾಮ ಮಾಡಿ ಭಕ್ತರನ್ನು ತನ್ನ ಮಡಿಲಿಗೆ ಬರ ಮಾಡಿಕೊಳ್ಳಲಿ  ಎಂದು ಆಶಿಸೋಣ.

ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (02-04-2021) ಮಧ್ಯಾಹ್ನ 1:30ರ ಹೊತ್ತಿಗೆ ಜರುಗಿದ ಭವ್ಯ ರಥೋತ್ಸವದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ