ಏಪ್ರಿಲ್ 03, 2011

ಯುಗಾದಿ

ಯುಗಾದಿಯ ಮಂದಾನಿಲ ಬೀಸುತ್ತಿದೆ
ಮರಗಿಡ ಬಳ್ಳಿಗಳಿಂದ
ಹಸಿರು ಚೇತನವಾಗಿ
ಪುಷ್ಪದುಸಿರು ಹೇಳುತ್ತಿದೆ
ಆವಣಿಯ ಆಲಂಗಿಸಿ ಆಗಮಿಸಿದೆ ಯುಗಾದಿ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಇಂಚರದ ಕೊರಳಿಂದ
ಆಹ್ಲಾದದ ಆಹ್ವಾನವಿತ್ತು
ಮಯೂರ ಸಾಂಗತ್ಯದ
ಸಾಂವತ್ಸರ 'ಸಂಗೀತ ಸಂಜೆ' ಸವಿಯುವ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಬೇವುಬೆಲ್ಲ ಸಿಹಿಕಹಿ
ಸುಖದುಖಃ ಸಮರಸದಲಿ
ಜೀವನ ಸಾಗುತಲಿರಲಿ
ಯುಗಾಂತ ಯುಗಾಂತರ ಯುಗಾದಿ ಚಕ್ರದಲ್ಲಿ...

ಗುಲ್ಬರ್ಗಾ ಉತ್ಸವ...

ಬಹು ಸಂಸ್ಕೃತಿಯ ಸಂಗಮದಲಿ
ಸಹಬಾಳ್ವೆಯ ಸಮರಸ
ಸರ್ವಧರ್ಮ ಸಮನ್ವಯತೆಯಲಿ
ಸೂರ್ಯನಗರಿಯೇ ವಿಹಂಗಮ....

ಈ ಬಿಸಿಲೂರು ಫಲವತ್ತು...
ಪಡೆಯಿರಿ ಇದರ ಸವಲತ್ತು...

ಕಲ್ಯಾಣಕೆ ತೆರೆದಿಹ ಹೆಬ್ಬಾಗಿಲು
ಕವಿ ಕಲಾವಿದರಿಗೆ ತೂಗಿ ತೊಟ್ಟಿಲು
ಸಂಗೀತ ಸಾಹಿತ್ಯ ಶಿಲ್ಪಕಲೆಯ ಮೆಟ್ಟಿಲು
ಇತಿಹಾಸ ಹೇಳುತ್ತಿವೆ ಕೋಟೆ ಕೊತ್ತಲು...

ಹೂವರಳಿ ನಿಂತ ಜಿಲ್ಲೆಯ...
ಭವ್ಯ ಚರಿತೆ ನೀ ಬಲ್ಲೆಯ...

ಬಾನೆತ್ತರ ಬಿಡಿಸಿಟ್ಟ ಬಣ್ಣದ ಕನಸುಗಳೇ
ನನಸು ಮಾಡಲು ಎಷ್ಟೋ ಮನಸುಗಳಿವೆ
ಗರಿಗೆದರಿದ ನೂರಾಸೆಗಳ ಮುಂದಿದೆ ಉಜ್ವಲ ಭವಿಷ್ಯ
ಮುನ್ನುಗ್ಗು ಶ್ರಮಜೀವಿ ನಿನಗೀ ಉತ್ಸವ...

ಉತ್ಸವ ಉತ್ಸವ ಗುಲ್ಬರ್ಗಾ ಉತ್ಸವ...
ಇದು ’ಅನಂತ ಶಕ್ತಿ’ಯ ಉತ್ಸಾಹ...

ಫೆಬ್ರವರಿ 06, 2011

ಇಳಿದು ಬಾ ಬಾಲೆ

ಹಂಬಲಿಸುತ್ತಿದೆ ಮನ
ಅಂಬರದ ತಾರೆಯನ್ನು
ಸಿಗಬಲ್ಲುದೆ ಹೇಳು ಚಂದಿರ ನನ್ನನು ಬೆಳಗುವುದೆಂದು.
ಅನುರಾಗವೇ ಮೇರುಗಿರಿಯಾಗಿ
ಮುಟ್ಟಬಯಸುವೆ ಚಂಚಲೆ
ಹೋಗದಿರು ಇರುಳುರುಳಿದಂತೆ ಹಗಲಲ್ಲಿ ಆಗಿ ಮಾಯ.
ಸಾಲು ಆಸೆಗಳ ಬಲಿಯಕೊಟ್ಟು
ಬರುವೆ ನಿನ್ನೆಡೆಗೆ ಸೋಲನೊಪ್ಪು
ಗೆಲುವು ನಿನ್ನಡಿಗಿಟ್ಟು ತೊಡಿಸುವೆ ನನ್ನ ಖುಷಿ ಮುಡಿಗೆ.
ಬಾಲೆ ಇಳಿದು ಬಾ ಬಳಿಗೆ
ಪ್ರೇಮದ ಆಲಿಂಗನದೊಳಗೆ
ಬದುಕುಪೂರ್ತಿ ಆವರಿಸಿಬಿಡುವನು ಹುಣ್ಣಿಮೆಯ ಚಂದಿರ ನಮ್ಮೋಳಗೆ.

ಜನವರಿ 30, 2011

ಮಾತಿನ(ನ)ಲ್ಲೆ

ಮಾತಿನ ಮೋಡಿಯಲ್ಲಿ ಆಕೆ ಮಾನಸ ಸರೋವರದಲ್ಲಿ ಮೀಯಿಸಿ,
ತುಟಿಯಂಚಿನಿಂದ ಪೋಣಿಸಿಟ್ಟ ಶಬ್ದಗಳು ಕುಸುಮ ಘಮ !
ಆ ಮಕರಂದ ಘಮಿಸುತ್ತ ನಾ ಸೋತು ಮೈಮರೆತೆನಲ್ಲೆ...
ಎಲ್ಲಿಂದಲೋ ತೂರಿಬಂದ ಪ್ರೀತಿ ತಂಗಾಳಿ
ಹಾರಿಸಿಕೊಂಡು ಹೋಯಿತಲ್ಲ ಸಂಗವ ತೋರಿ,
ಮಾತಿನ ಮಂಥನದಲ್ಲಿ ಒಸರಿತು ನಮ್ಮಲ್ಲಿ ಒಲವು,
ಹೌದೆಂದು ವಾದಿಸುವ ಮಾತಿಗೆ ಮಿಡಿಯಲೊಲ್ಲವು ನನ್ನ ತುಟಿ !
ನೀನಾದರು ಹೇಳಬಾರದೆ ಪಾಪ...! ಅಂತ ಕನಿಕರಿಸಿ
ನಾನಂತು ಗೆಲ್ಲಲ್ಲ, ನೀನಾದರೂ ಸೋಲಲ್ಲ
ಇನ್ನೆಷ್ಟು ದಿವಸ ಈ ಸಂಗ್ರಾಮ ?
ಸಂಧಾನಕ್ಕೆ ಯಾರಿರುವರೋ ಶ್ರೀ ಕೃಷ್ಣ ಪರಮಾತ್ಮ.
ನೀನು ನಕ್ಕಾಗಲೆ ನಾನಾಗಬೇಕಿತ್ತು ಪರವಶ
ನಾನಾದ ಪೆಚ್ಚಿಗೆ ನೀನು ಮಾಡಿಕೊಳ್ಳಬೇಕಿತ್ತು ಕೈವಶ
ಸುಖಾಸುಮ್ಮನೆ ಆಗಿಹೋಯಿತಲ್ಲೆ ಕಾಲಹರಣ !
ಹೇಗೆ ಪತ್ತೆಯಾಗಲಿ ಹೇಳು ನೀ ಮಾಡಿರುವೆ ಈಗ ಅಪಹರಣ.
ನೂರು ಮಾತನಾಡೋ ನಲ್ಲೆ ತುಂಬಿಕೊಂಡಿದ್ದರೂ
ಮಾಡಲಾಗುತಿಲ್ಲ ನಿನಗೆ ಪ್ರೀತಿಯ ನಿವೇದನೆ !
ಮಾತಿಗಾಗಿ ಮರುಕಪಡುವ ನನ್ನ ಅರ್ಥಮಾಡಿಕೋ ವೇದನೆ ?
ಇರಲಿ ಬಿಡು ನಲ್ಲೆ.... ನನಗರ್ಥವಾಯಿತು,
ಮಾತಿಗೂ ಮೀರಿದ ‘ಪ್ರೇಮ’ ನಮ್ಮದಲ್ಲವೆ !
ನಾನು ಮೌನ ನೀನು ತಾನ
ನಿರವದಲ್ಲೂ ಹೊರಡುತಿದೆ ಒಲವಿನ ನಿನಾದ
ಎಷ್ಟು ಮಧುರ, ಎಷ್ಟು ಸುಂದರ ನಮ್ಮ ಪ್ರೇಮ ಮಂದಾರ...

ಅಯ್ಯೋ ನಗ್ರೀ.....

ಅಯ್ಯೋ ನಗ್ರೀ.....
“ನಗಬೇಕು ನಗಿಸಬೇಕು ಅದು ನಮ್ಮ ಧರ್ಮ,
     ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ !”
    
       ನಗ್ರೀ ಅಂಥ್ಹೇಳಿ ಕೈ ಕಟ್ಟಿಕೊಂಡು ಕೂತ್ರ ಆ ನಗು ಬಾ ಅಂದ್ರ ಹ್ಯಾಂಗ್ ಬರಬೇಕು ಪಾಪ ! ಖರೆ ಐತಲ್ಲ ಮಾತು. ಯಾವುದೇ ನೋಡ್ರಿ, ’ಮಾತೇನು ಎಲುಬಿಲ್ಲದ ನಾಲಿಗೆ’ ಅಂಥ್ಹೇಳಿ ಏನೇನೋ ಹೇಳಿ ಬಿಡಬಹುದು. ಆದ್ರ ಆ ಮಾತು ಆಗುವಂಥದ್ದಾ ? ನಮ್ಮ ಕೈಯಿಂದ ಮಾಡುವಂಥದ್ದಾ ? ಅಂತ ವಿಚಾರ ಮಾಡಿ ಆಡಬೇಕು. ಆದ್ರ ಯಾರೂ ಆ ವಿಚಾರ ಮಾಡೋ ಪ್ರಯತ್ನ ಸಹಿತ ಮಾಡಲ್ಲ. ಆ ರೀತಿ ವಿಚಾರ ಮಾಡದೆ ಮಾತಾಡೋರ ತಲ್ಯಾಗ ಏನಿರ್ತದೊ ಗೊತ್ತಿಲ್ಲ. ಹಿಂಗ್ ದೊಡ್ಡ ದೊಡ್ಡ ಮಾತಾಡಿದ್ರ ನಾವೂ ದೊಡ್ಡವ್ರು ಅನಿಸಿಕೊಳ್ತಿವಂತ ತಿಳ್ಕೊಂಡಿರ್ತಾರೇನೋ ! ಹಿಂದ ಮುಂದ ನೋಡಲಾರ್ದೆ ಅಂದೆ ಬಿಡ್ತಾರ. ಈ ರೀತಿ ಒಬ್ರಾದ್ರ, ಇನ್ನ ಕೆಲವ್ರು ಇದ್ದಿರ್ತಾರ... ಎಂಥವ್ರು ಅಂದ್ರ ಅವ್ರು ಹೇಳೊದು ಒಂದು ನಡೆಯೋದೆ ಒಂದು. ಅವ್ರು ನಡೆಯೋ ದಾರಿಗೂ ಆಡೋ ಮಾತಿಗೂ ಅದೇನೋ ಅಂತಾರಲ್ಲ ’ಅಜಗಜಾಂತರ ವ್ಯತ್ಯಾಸ’ ಹಾಂಗ್ ಇರ್ತದ. ಆದ್ರೂ ಮತ್ತ ಮ್ಯಾಲ ತಾವು ಆಡಿದ ಮಾತಿಗಿ ಸಪೊರ್ಟ್ ಹ್ಯಾಂಗ್ ಮಾಡ್ತಾರಂದ್ರ ’ಕೊಟ್ಟ ಮಾತಿಗೆ ತಪ್ಪಿ ನಡೆದೊಡೆ ಮೆಚ್ಚನಾ ಪರಮಾತ್ಮನು’ ಅನ್ನೊ ಹಾಗೆ. ಅಂಥವರ ಜೋಡಿ ಮಾತಾಡೊದೆ ಬೇಕಾರ್ ಅನ್ನಿಸಿ ಬಿಡ್ತದ.
     ಪ್ರತಿಯೊಬ್ಬ ಮನುಷ್ಯನ ಸ್ವಭಾವ ಭಿನ್ನ ಭಿನ್ನ ರೀತಿಯಾಗೆ ಇದ್ದಿರ್ತದ. ಹ್ಯಾಂಗಂತ ಕೇಳ್ತಿರೇನು ? ಈಗ ನೋಡ್ರಿ ನಾವು ಅಂತಿರ್ತೀವಲ್ಲ ’ಅಂವಾ ಹ್ಯಾಂಗ್ ಇದಾನ್ ನೋಡು. ಹ್ಯಾಂಗ್ ಮಾಡ್ತಾನ, ಎಷ್ಟು ವಿಚಿತ್ರ ಇದಾನ ಅಂತ’. ನಾವು ಹಾಗ್ ಅನ್ಲಿಕ್ಕಿ ಕಾರಣ ಅವರನ್ನ ನಮ್ಮ ಸ್ವಭಾವಕ್ಕ ಹೋಲಿಸಿಕೊಂಡು ನೋಡಿರ್ತೀವಿ. ಅವನು ನಮ್ಮಂಗೆ ಯಾಕಿರಲ್ಲ, ನಮ್ಮ ತರಾನೆ ಯಾಕ್ ವಿಚಾರ ಮಾಡಲ್ಲ, ನಾವು ಆಡಿದಂಗೆ ಯಾಕ್ ಮಾತಾಡಲ್ಲ ಅಂತ. ಯಾಕಂದ್ರ ಅವನು ನಮ್ಮಂಗೆ ಇರ್ಲಿ ಅಂತ ಬಯಸ್ತೀವಿ. ಆದ್ರ ಯಾರೂ ಆ ರೀತಿ ಇರಲ್ಲ. ಅಲ್ಲದೆ ಯಾರೂ ತಮ್ಮ ಸ್ವಂತಿಕೆ ಬಿಟ್ಟುಕೊಡಲು ಬಯಸಲ್ಲ. ಬಯಸಬಾರದು ಕೂಡಾ.
    ಮನುಷ್ಯ ತನ್ನಲ್ಲಿ ಎನೆಲ್ಲಾ ಇದ್ರೂ, ಎಷ್ಟೇ ಇದ್ರೂ ಈ ಚಿಂತಿ ಮಾಡೋದು ತಲೆ ಕೆಡಿಸಿಕೊಳ್ಳೊದು ಬಿಡು ಅಂದ್ರೂ ಬಿಡಲ್ಲ. ಹಿಂಗ್ಯಾಕ ಅಂತ ನೀವು ತಲೆಯಲ್ಲಿ  ಎಷ್ಟೇ ಹುಳ ಬಿಟ್ಟುಕೊಂಡ್ರೂ ಗೊತ್ತಗಲ್ಲ. ಅದು ಮನುಷ್ಯ ಸಹಜ ಗುಣ ಅಂತ ಸಮರ್ಥನೆ ಮಾತು ಹೇಳಿ ಬಿಟ್ಟುಬಿಡ್ತೀವಿ. ಅದಕ್ಕೆ ನೋಡ್ರೀ ನಮ್ಮ ಹಿರಿಯರು ಎಷ್ಟು ಛಂದ್ ಹೇಳ್ಯಾರ. ಮನುಷ್ಯನಿಗೆ ಎನೆಲ್ಲಾ ಇದ್ರೂ ಅವನು ಪರಿಪೂರ್ಣನಲ್ಲ ಅಂತ. ಆದ್ರ ಯಾರೂ ಇದನ್ನ ಅರ್ಥ ಮಾಡಿಕೊಳ್ಳಲು ಹೋಗೊದೇ ಇಲ್ಲ. ಈಗ ಯಾರಾದ್ರೂ ’ನನಗೇನು ಕಮ್ಮದ ! ಎಲ್ಲಾನೂ ಅದ ನನ್ಗ !’ ಅಂತ ಹೇಳಿದ್ರೂ ಅವ್ರೀಗೆ ಗೊತ್ತಿಲ್ಲಧಂಗ ಅದೆಷ್ಟೋ ಕೊರತೆಗಳು ಅವರಲ್ಲಿ ಅಡಗಿರ್ತವ.
      ಇನ್ನ ಕೆಲವ್ರು ಇದ್ದಿರ್ತಾರ. ಮಾತ್ ಮಾತಿಗೂ ನೆಗೆಟೀವ್ ವಿಚಾರನೇ. ಯಾರಿಗೋ ಇಷ್ಟು ಟೈಮಿಗೆ ಬಾ ಅಂದಿರ್ತಾರ. ಅವರ ಜೊತೆ ಬಹಳ ಇಂಪಾರ್ಟೆಂಟ್ ಕೆಲಸ ಇದ್ದಿರ್ತದ. ಅವನು ಇಷ್ಟು ಟೈಮಿಗಿ ಬರ್ತಿನಿ ಅಂತ ಹೇಳಿರ್ತಾನ. ಆದ್ರೂ ಇವರು ವಿಚಾರ ಹ್ಯಾಂಗ್ ಮಾಡ್ತಾರ್ತನಂದ್ರ ’ಒಂದು ವೇಳೆ ಅವನು ಆ ಟೈಮಿಗೆ ಬರ್ಲಿಕಾಗಲಿಲ್ಲ ಅಂದ್ರ ಹ್ಯಾಂಗ್ ಮಾಡೋದು’. ಅವನೀಗೀಗ ಆಲ್ರೆಡಿ ಒಂದು ಒಳ್ಳೆ ಕೆಲಸ, ಕೈತುಂಬಾ ಸಂಬಳ, ಸುಂದರವಾದ ಹೆಂಡತಿ, ಎರಡು ಮುದ್ದು ಮಕ್ಕಳು. ನೋಡಿದವ್ರು ಹೊಟ್ಟೆಕಿಚ್ಚು ಪಡುವಂಥ ಸುಖಿ ಸಂಸಾರ. ಇಷ್ಟೆಲ್ಲ ಇದ್ದ ಮೇಲೂ ಸಹ ಅವನು ಒಬ್ಬನೆ ಕೂತಾಗ ಏನ್ ವಿಚಾರ ಮಾಡ್ತಿರ್ತಾನಂದ್ರ “ಅಲ್ಲ ! ನನಗ ಈ ಕೆಲಸ ಇರ್ತಿದಿಲ್ಲ ಅಂದ್ರ ಹ್ಯಾಂಗಿರ್ತಿತ್ತೋ ಶಿವನೇ ! ನನಗ ಇಂಥ ಹೆಂಡ್ತಿ ಸಿಗ್ತಿದಿಲ್ಲ ಅಂದ್ರ ಎಂಥಕಿ ಸಿಗ್ತಿದ್ಳೋ ಭಗವಾನಾ !”  ಇಂಥಪರಿ ವಿಚಾರ ಮಾಡವ್ರು ಇರ್ತಾರಾ ದೇವ್ರೇ....
      ಕೆಲವೊಬ್ರ ಇಷ್ಟ ಹ್ಯಾಂಗಿರ್ತದ ನೋಡ್ರಿ. ಅದು ಎಲ್ರಿಗೂ ಕಷ್ಟ ಅನ್ನಿಸಿಬಿಡ್ತದ. ಹಾಂಗಂತ ಹೀಳಿ ಅವ್ರೀಗಿ ಕೆಟ್ಟವರು ಅನ್ಲಿಕ್ಕೂ ಬರಲ್ಲ. ಯಾಕಂದ್ರ ಒಳ್ಳೆ ವಿಚಾರದ ಬುದ್ಧಿವಂತನೂ ಅವರಲ್ಲಿ ಇದ್ದಿರ್ತಾನ. ಆದ್ರೂ ಅವ್ರು ಎಲ್ರಿಗೂ ಇಷ್ಟ ಆಗಲ್ಲ. ಅವರದ್ದೇನು ಪಾಲಿಸಿ ಅಂದ್ರ ನನ್ನ ಮಾತಿಗೆ ಎಲ್ರೂ ಹೌದು ಅನ್ನಬೇಕು. ಅದು ತಪ್ಪಿರ್ಲಿ ಸರಿ ಇರ್ಲಿ. ಅವರ ಮಾತಿಗೆ ಪರ್ಯಾಯ ಅರ್ಥ ಕೊಡಲು ನಮ್ಮ ಹತ್ರ ಉತ್ರ ಇದ್ರೂ ಅವರ ಮಾತಿಗೆ ತಲೆ ತೂಗಲೆ ಬೇಕು. ಅಂಥವರಿಗಿ ಮಾತ್ರ ಇವ್ರು ಜೊಗುಳ ಹಾಡೊರು. ಅಂದ್ರೆ ಅವ್ರನ್ನೆ ತಮ್ಮ ಫ್ರೆಂಡ್ಸಂತ ಸೆಲೆಕ್ಟ್ ಮಾಡ್ಕೊಂಡಿರ್ತಾರ. ಅವ್ರಿಗಿ ಏನು ಬೇಕು ಎಲ್ಲ ಕೊಟ್ಟು ಸಹಾಯ ಮಾಡ್ತಾರ. ಅದೇ ಒಂದು ವೇಳೆ ಇವನ ಮಾತಿಗೆ, ಇವನ ವಿಚಾರಕ್ಕ ಪ್ರತಿರೋಧ ವ್ಯಕ್ತಪಡಿಸಿದ್ರ ಇವರಿಬ್ರೂ ಕಟ್ಟಾ ವಿರೋಧಿಗಳಾಗ್ತಾರ. ಇಂಥವರ ನಡುವೆ ನಮ್ಮಂಥವರು ಹ್ಯಾಂಗಿರ್ಬೇಕು ಅನ್ನೋದು ವಿಚಾರ ಮಾಡುವಂಥದ್ದು.

ಓ ಇನಿಯಾ...

ಕತ್ತಲೆಯ ದಾರಿಯನ್ನು
ಹಿತ್ತಲ ಬಾಗಿಲಲ್ಲಿ ನಿಂತು ನೋಡುವ ಕಣ್ಣುಗಳಿಗೆ
ರೆಪ್ಪೆಗಳೇಕಿವೆ ಎನ್ನುವ ಬೇಸರ !
ಯಾವಾಗ ಬರುವನೋ ಇನಿಯ….
ಕೈ ಹಿಡಿದು ಬರಸೆಳೆದು
ಅಪ್ಪಿ ಮುದ್ದಾಡಿ ಕಪ್ಪ ಕಾಣಿಕೆ ಬೇಡವೆಂದರೂ ಕೊಟ್ಟ !
ಅದನ್ನೀಗ ಇಟ್ಟುಕೊಳ್ಳಲಾಗದೆ ಹಂಚುಕೊಳ್ಳೋಣವೆಂದರೆ
ಯಾವಾಗ ಬರುವನೋ ಇನಿಯ….
ಕಣ್ಣಲ್ಲಿ ಕನಸು ಬಿತ್ತಿ, ತುಟಿ ಮೇಲೆ ಜೇನು ಸುರಿಸಿ
ಸಿಹಿಯ ಆರಲು ಬಿಡದೆ ಮಲ್ಲಿಗೆ ಮುಡಿಸಿ
ನಾ ದುಂಬಿ, ನೀ ಮಕರಂದವೆಂದು ಹೇಳಿ ಹೋದ
ಯಾವಾಗ ಬರುವನೋ ಇನಿಯ….
ಹೃದಯದ ಬದಿಗೀಗ ಕಡ್ಡಿ ಗೀರಿಟ್ಟರೂ
ಅವನಪ್ಪುಗೆಯಲ್ಲಿ ಕಂಡಂತೆ ಬಿಸಿಯ ಅನುಭವಿಸಿ
ಕಾಯುತಿವೆ ಕಣ್ಣು ದೂರದ ದಾರಿಯಲಿ ನೆರಳನೊಂದು
ಅದು ಇನಿಯನದಾಗಿರಲಿ ಎಂದು….

ಜನವರಿ 14, 2011

ನಾವು ನೀವು ಕೂಡಿ…


          ಕನ್ನಡ ಚಿತ್ರರಂಗ ಇಂದು ತನ್ನದೆ ಆದ ಭದ್ರ ಮತ್ತು ಭವ್ಯವಾದ ಸ್ಥಾನವನ್ನು ಅನಾವರಣಗೋಳಿಸಿಕೊಂಡಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯದ ಅರಿವನ್ನು ಮೂಡಿಸುತ್ತಿದೆ. ಅರಿವು ಅನ್ನೊದಿಕ್ಕೆ ಕಾರಣ ಇದೆ. ಯಾಕೆಂದ್ರೆ ಕನ್ನಡ ಚಿತ್ರರಂಗದ ಇತಿಹಾಸದೆಡೆಗೆ ಹೊರಳಿ ನೋಡಿದಾಗ ಅದೆಷ್ಟೋ ಅದ್ಭುತವಾದ ಚಿತ್ರಗಳು ಅಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಬಂದಿವೆ. ಆದ್ರೆ ಪ್ರಾರಂಭದ ಕೆಲವು ದಶಕಗಳಲ್ಲಿ ಅದನ್ನು ಗಮನಿಸುವಷ್ಟು, ಬೇರೆಯವರು ಆಕರ್ಷಿತರಾಗುವಷ್ಟು ಉದ್ಯಮ ಬೆಳೆದಿರಲಿಲ್ಲ. ಚಿತ್ರೀಕರಣದ ಸೌಲಭ್ಯ, ಸ್ಟುಡಿಯೊಗಳು, ತಾಂತ್ರೀಕ ಸಲಕರಣೆಗಳು ನಮ್ಮಲ್ಲಿನ್ನು ಬೆಳವಣಿಗೆ ಹೊಂದಿರಲಿಲ್ಲ. ಅದೆಲ್ಲದಕ್ಕಾಗಿ ಬೇರೆ ರಾಜ್ಯದ ಮೊರೆ ಹೊಗಬೇಕಾಗಿತ್ತು. ಹೆಚ್ಚಾಗಿ ಮದ್ರಾಸಿಗೆ ಹೋಗುತಿದ್ದರು. ಅದು ಅನಿವಾರ್ಯವು ಆಗಿತ್ತು. ಇಂದು ಅದಕ್ಕೇನೂ ಕೊರತೆ ಇಲ್ಲ. ಕನ್ನಡ ಚಿತ್ರೋದ್ಯಮ ಅನ್ನೋದು ಈಗ ಮುಗಿಲೆತ್ತೆರಕ್ಕೆ ಬೆಳೆದು ತನ್ನ ವೈಶಾಲ್ಯತೆಯನ್ನು, ತನ್ನ ನಿಜ ರೂಪವನ್ನು ತೋರಿಸುತ್ತಿದೆ. ಈಗ ನಮ್ಮಲ್ಲಿ ಎಲ್ಲವೂ ಇದೆ ಎಂದು ವಿಶ್ವಾಸದಿಂದ ಹೇಳಿ ಬೀಗುತ್ತಿದೆ.
     ಕನ್ನಡ ಚಿತ್ರರಂಗಕ್ಕೆ ಸಿನೆಮಾ ತಡವಾಗಿ ಕಾಲಿಟ್ಟರೂ, ನಿಧಾನವಾಗಿ ಬೆಳವಣಿಗೆ ಕಂಡರೂ ಸಹಿತ ಭದ್ರವಾದ ಬುನಾದಿ ಹಾಕಿ ಭವಿಷ್ಯದಲ್ಲಿ ಚಿತ್ರೋದ್ಯಮ ಆ ಎತ್ತರಕ್ಕೆ ಬೆಳೆಯಬೇಕೆನ್ನುವ ಕನಸನ್ನಿಟ್ಟುಕೊಂಡು ವಿಶ್ವಾಸದಿಂದ ಸರಿಯಾದ ಹೆಜ್ಜೆಯನ್ನೆ ಹಾಕಿತು. ತನ್ಮೂಲಕ ತಾಯ್ನಾಡಿಗಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದೆ. ಎಲ್ಲಾ ಭಾಷೆಯ ಚಿತ್ರರಂಗದ ಜೊತೆಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಂಡು ಬಂದಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ಕಲಾವಿದರು ನಮ್ಮ ಚಿತ್ರಗಳಲ್ಲಿ, ನಮ್ಮ ಕಲಾವಿದರು ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಈ ಪರಂಪರೆಯನ್ನು ಕಾಪಾಡಿಕೊಂಡು ಬರುತಿದ್ದಾರೆ. ಈ ಕೊಡು ಕೊಳ್ಳುವ ಸಂಪ್ರದಾಯ ಇದೇ ರೀತಿ ಮುಂದುವರಿಯಲಿ ಎನ್ನುವುದು ನಮ್ಮೆಲ್ಲರ ಆಶಯ. ಅದಕ್ಕೆ ಸಾಕ್ಷಿಯಾಗಿ ಅನೇಕರು ನಮ್ಮೆದುರು ವಿರಾಜಮಾನರಾಗಿದಾರೆ.
      ಭಾರತೀಯ ಚಿತ್ರರಂಗದಲ್ಲಿನೆ ಅಚ್ಚರಿ ಮೂಡಿಸಿರುವ ಅಮೋಘ ಪ್ರತಿಭೆ, ದಕ್ಷಿಣ ಭಾರತದಲ್ಲಿನೆ ಮೆಗಾ ಸ್ಟಾರ್ ಆಗಿ ಮೆರೆಯುತ್ತಿರುವ ಎಲ್ಲರ ಆರಾಧ್ಯದೈವ ಸ್ಟೈಲ್ ಕಿಂಗ್ ರಜನಿಕಾಂತ್, ಇನ್ನೊಬ್ಬ ಅಪ್ಪಟ ಪ್ರತಿಭಾವಂತ ನಟ Action King ಅರ್ಜುನ್ ಸರ್ಜಾ, ಮೊನ್ನೆಯಷ್ಟೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪುಟವಿಟ್ಟ ಚಿನ್ನಕ್ಕಿಂತಲು ದುಪ್ಪಟ್ಟಾದ ಪ್ರತಿಭೆ ಪ್ರಕಾಶ್ ರೈ- ಇವರೆಲ್ಲಾ ಅಪ್ಪಟ್ಟ ಕನ್ನಡಿಗರು. ಕನ್ನಡದ ಮಣ್ಣಲ್ಲಿ ಅರಳಿದ ಕಲಾ ಕುಸುಮಗಳು. ತಮ್ಮ ಸೌಗಂಧವನ್ನು ಇಡಿ ಭಾರತೀಯ ಚಿತ್ರರಂಗದಲ್ಲಿ ಹಬ್ಬಿಸಿದ್ದಾರೆ. ಇದನ್ನು ಪ್ರತಿಯೋಬ್ಬ ಕನ್ನಡಿಗ ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಾನೆ. ಈ ಕಲಾವಿದರು ಕೂಡ ತಮ್ಮ ತಾಯ್ನುಡಿಯ ಬಗ್ಗೆ, ಜನ್ಮ ಕೊಟ್ಟ ಮಣ್ಣಿನ ಬಗ್ಗೆ, ಆಶೀರ್ವಾದ ಮಾಡಿದ ತಾಯ್ನಾಡ ಜನರ ಬಗ್ಗೆ ಅಷ್ಟೇ ಗೌರವದಿಂದ ಮಾತಾಡುತ್ತಾರೆ.
     ಕಳೆದ ವರ್ಷ ನಡೆದ ಅಮೃತ ಮಹೋತ್ಸವದಲ್ಲಿ ರಜನಿಕಾಂತ್ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡಿದ್ದು ಕೇಳಿ ಕನ್ನಡಿಗರು ಬಹಳ ಖುಶಿಪಟ್ರು. ಅವರು ಕನ್ನಡ ಚಿತ್ರ ಕಲಾವಿದರನ್ನು, ತನಗೆ ಬಾಳು ನೀಡಿದ ಕನ್ನಡ ಚಿತ್ರರಂಗವನ್ನು, ಇನ್ನು ಪ್ರೀತಿಸುತ್ತಿರುವ ಕನ್ನಡಿಗರನ್ನು ನೆನಪಿಸಿಕೊಂಡ ರೀತಿ ಅನನ್ಯವಾಗಿತ್ತು. ಪ್ರಕಾಶ್ ರೈ ಕೂಡ ಅಷ್ಟೆ. ಅವರ ಮಾತಲ್ಲಿ ಎಲ್ಲಿಯೂ ಕನ್ನಡ ಚಿತ್ರರಂಗ ತನ್ನನ್ನು ನಿರ್ಲಕ್ಷ ಮಾಡಿದೆ ಅನ್ನೋ ವಿಷಾದ ಕಾಣಲಿಲ್ಲ.
     ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವ ಇವರ ಜೋತೆಗೆ ಡಾ.ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಉಪೇಂದ್ರ ಮುಂತಾದವರು ಬೇರೆ ಭಾಷೆಗೂ ಹೋಗಿಬಂದಿದಾರೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯ ಏನೆಂದರೆ ಡಾ.ರಾಜ್ ಕುಮಾರ್ ಸಹಿತ ಒಂದು ಅನ್ಯ ಭಾಷಾ ಚಿತ್ರದಲ್ಲಿ ಅಭಿನಯಿಸಿದ್ದರೆ ಅನ್ನೋದು. ೧೯೫೪ ರಲ್ಲಿ ಅವರು ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಯಶಸ್ವಿಯಾದ ನಂತರ ಅದನ್ನು ತೆಲುಗಿನಲ್ಲಿ ಮಾಡಲಾಯಿತು. ಆ ತೆಲುಗು ಅವತರಣಿಕೆ ಶ್ರೀ ಕಾಳಹಸ್ತಿ ಮಹಾತ್ಮಂ ನಲ್ಲಿ ಡಾ.ರಾಜ್ ಅವರೇ ನಾಯಕ ನಟರು.
       ಇನ್ನು ನಟಿಯರ ಬಗ್ಗೆ ಬಂದರೆ ಪಂಢರಿಬಾಯಿ, ಭಾರತಿ, ಜಯಂತಿ, ಬಿ.ಸರೋಜಾದೆವಿ, ಜಯಮಾಲಾ, ಮಾಧವಿ ಮುಂತಾದ ಕನ್ನಡತಿಯರು ತಾವೇನೂ ಕಮ್ಮಿಯಿಲ್ಲವೆಂದು ತೋರಿಸಿದ್ದಾರೆ.
      ಇತ್ತೀಚೆಗೆ ಬಂದಾಗ ಇಲ್ಲಿ ವಿಶೇಷವಾಗಿ ಕಿಚ್ಚ ಸುದೀಪ್ ಅವರ ಹೆಸರನ್ನು ತೋಗೋಬೇಕು. ಇವರ ಅದ್ಭುತ ಪ್ರತಿಭೆಗೆ ಬಾಲಿವುಡ್ ಬಿಚ್ಚುಮನಸ್ಸಿನ ಸ್ವಾಗತ ನೀಡಿದೆ. ಈಗಾಗಲೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿ ಬಂದಿದ್ದು, ಮೂರು ಬಿಡುಗಡೆ ಕಂಡಿವೆ. ಇದರ ಜೋತೆಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಮೋದಲ ಕನ್ನಡ ಚಿತ್ರ ಮೈ ಆಟೊಗ್ರಾಫ್ ಹಿಂದಿಯಲ್ಲಿ ತರುವವರಿದ್ದಾರೆ. ಅದು ಅಲ್ಲದೆ ರಾಂಗೋಪಾಲ್ ವರ್ಮಾ ಅನ್ನೊ ದಿಗ್ದರ್ಶಕರ ಅಭಯ ಹಸ್ತ ಇವರ ಮೇಲಿದೆ. ಜೋತೆಗೆ ಬಿಗ್ಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಅಭಿನಯಿಸಿ ಅವರಿಂದ ಶಹಬ್ಬಾಷ್ ಗಿರಿ ಪಡೆದಿದ್ದಾರೆ. ಈ ನಟನ ನಟನಾ ವೈಖರಿ ನೋಡಿ ಬಾಲಿವುಡ್ ಚಿತ್ರ ಪ್ರೇಮಿಗಳು ಅಷ್ಟೆ ಅಲ್ಲ ಬಾಲಿವುಡ್ ಬಾದಷಹ ಶಾಹರುಖ್ ಖಾನ್ ಸಹಿತ ಬೆರಗಾಗಿದ್ದಾರೆ. ಇದೇನು ಸಣ್ಣ ವಿಷಯ ಅಲ್ಲ. ಆದಷ್ಟು ಬೇಗ ಸುದೀಪ್ ಬಾಲಿವುಡ್ ಬಾನಂಗಳದಲ್ಲಿ ಪ್ರಕಾಶಮಾನವಾಗಿ ಬೆಳಗಲಿ. ಆದರೆ ಕನ್ನಡ ಚಿತ್ರರಂಗ ರಜನಿಕಾಂತ್, ಅರ್ಜುನ್ ಸರ್ಜಾ, ಪ್ರಕಾಶ್ ರೈ ಇಂಥವರಿಗೆ ತೋರಿಸಿದ ಉದಾರ ನಿರ್ಲಕ್ಷ ಸುದೀಪ್ ಅವರಿಗೆ ತೋರಿಸದಿರಲಿ.
      ಇದು ನಮ್ಮವರ ಮಾತಾದರೆ ಬೇರೆ ಭಾಷೆಯ ಕಲಾವಿದರು ನಮ್ಮ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಅನೇಕ ಉದಾಹರಣೆಗಳಿವೆ. ಇದಕ್ಕೆ ಬಹಳ ವರ್ಷಗಳ ಇತಿಹಾಸನೆ ಉಂಟು. ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೆಶಕ ಪುಟ್ಟಣ್ಣ ಕಣಗಲ್ ೧೯೭೩ ರಲ್ಲಿ “ಸಾಕ್ಷಾತ್ಕಾರ” ಚಿತ್ರಕ್ಕಾಗಿ ಬಾಲಿವುಡ್ ನ ‘ದೊಡ್ಡ ನಟ’ ಪೃಥ್ವೀರಾಜ್ ಕಪೂರ್ ಅವರನ್ನು ಕರೆತಂದು ಪಾತ್ರ ಮಾಡಿಸಿದರು. ಅಷ್ಟೆ ಅಲ್ಲ ಅವರಿಂದಲೆ ಡಬ್ಬಿಂಗ್ ಕೂಡಾ ಮಾಡಿಸಿದರು. ಅದಕ್ಕಾಗಿ ಪೃಥ್ವೀರಾಜ್ ಕಪೂರ್ ಒಂದು ತಿಂಗಳಲ್ಲಿ ಕನ್ನಡ ಕಲಿತರಂತೆ. ಇದು ಆ ನಟನ ಮಹಾನತೆ ಮತ್ತು ಭಾಷೆಯ ಬಗೆಗಿನ ಗೌರವ ಎಂಥದ್ದು ಅನ್ನೊದನ್ನು ತೊರಿಸಿಕೊಡುತ್ತದೆ. ಕಪೂರ್ ಮನೆತನದ ಇನ್ನೊಂದು ಕುಡಿ ಅನೀಲ್ ಕಪೂರ್ ಚಿತ್ರರಂಗಕ್ಕೆ ನಾಯಕ ನಟರಾಗಿ ಪ್ರವೇಶ ಮಾಡಿದ್ದೆ ಕನ್ನಡ ಚಿತ್ರದ ಮೂಲಕ. ಕೆ.ಬಾಲಚಂದರ್ ನಿರ್ದೇಶನದ ಚೊಚ್ಚಲ ಮತ್ತು ಕನ್ನಡದ ಏಕೈಕ ಚಿತ್ರ “ಪಲ್ಲವಿ ಅನುಪಲ್ಲವಿ” ಯಲ್ಲಿ ಅಭಿನಯಿಸಿ ಜನಪ್ರೀಯರಾದರು. ಜೊತೆಗೆ ಶ್ರೇಷ್ಠ ನಟರುಗಳಾದ ನಸಿರುದ್ದಿನ್ ಷಾ, ಅಮರೀಶ್ ಪುರಿ, ಒಂ ಪುರಿ, ಜಾಕಿ ಶ್ರಾಫ್. ಇವರೆಲ್ಲರ ಜೊತೆಗೆ ಬಿಗ್ಗ್ ಬಿ ಅಮಿತಾಬ್ ಬಚ್ಚನ್ ಕೂಡ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟಿಯರಲ್ಲಿ ಹೇಳುವುದಾದರೆ ಬಾಲಿವುಡ್ನಲ್ಲಿ ತಮ್ಮದೆ ಛಾಪು ಮೂಡಿಸಿರುವಂಥ ಚಿರಯುವತಿ ರೇಖಾ, ಹವಾ ಹವಾಯಿ ಬೆಡಗಿ ಶ್ರೀದೇವಿ ಮತ್ತು ಜೂಹಿ ಚಾವ್ಲಾ ಇವರೆಲ್ಲಾ ಕನ್ನಡದ ಮೂಲಕ ಬೆಳಕಿಗೆ ಬಂದವರು. ನಂತರದಲ್ಲಿ ಹಿಂದಿಚಿತ್ರಗಳಲ್ಲಿ ಜನಪ್ರೀಯರಾದರು. ರೇಖಾ ಡಾ.ರಾಜ್ಕುಮಾರ್ ಅಭಿನಯದ ಗೋವಾದಲ್ಲಿ ಸಿ.ಐ.ಡಿ.೯೯೯ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಶ್ರೀದೇವಿ ಕೂಡ ಡಾ.ರಾಜ್ಕುಮಾರ್ ಅಭಿನಯದ ಭಕ್ತ ಕುಂಬಾರ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಜೂಹಿ ಚಾವ್ಲಾ ಅಂತು ರವಿಚಂದ್ರನ್ ಅವರ ಚಿತ್ರಗಳ ಮೂಲಕ ಯಶಸ್ವಿ ನಾಯಕಿ ನಟಿಯಾಗಿ ಗುರುತಿಸಿಕೊಂಡು ನಂತರ ಬಾಲಿವುಡ್ನಲ್ಲಿ ಮಿಂಚಿದರು. ಇವರೆಲ್ಲಾ ಮತ್ತೋಮ್ಮೆ ಕನ್ನಡದ ಕಡೆಗೆ ಮುಖ ಮಾಡಲಿಲ್ಲ. ಆದರೆ ಲಕ್ಷ್ಮೀ, ಜಯಪ್ರದಾ, ಸುಹಾಸಿನಿ, ಗೀತಾ ಬೇರೆ ಭಾಷೆಯವರಾದರೂ ಕೂಡಾ ಕನ್ನಡ ಚಿತ್ರಗಳಲ್ಲಿ ತಾವು ಮಾಡಿದ ಮೋಡಿಯಿಂದ ಕನ್ನಡದವರೇನೋ ಅನ್ನುವಷ್ಟರಮಟ್ಟಿಗೆ ನಮ್ಮವರಾಗಿ ಬಿಟ್ಟಿದ್ದಾರೆ. ಇದು ಈ ಮಣ್ಣಿನ ಗುಣ, ಇಲ್ಲಿನ ಚಿತ್ರರಸಿಕರ ಪ್ರೇಮ, ಅವರ ಹೃದಯ ವೈಶಾಲ್ಯತೆ ಅನ್ನಬಹುದು.
      ನಟ ನಟಿಯರು ಮಾತ್ರ ಅಲ್ಲ ಉಳಿದ ಕಲಾವಿದರು ಚಿತ್ರರಂಗದ ಅನೇಕ ವಿಭಾಗದಲ್ಲಿ ಕೆಲಸ ಮಾಡುವವರು ಕೂಡ ದೇಶದ ಎಲ್ಲ ಕಡೆ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದಾರೆ. ಬೇರೆ ಭಾಷೆಯಲ್ಲಿ ಹೆಸರು ಮಾಡಿದವರು ನಮ್ಮ ಭಾಷೆಯಲ್ಲಿ ಬಂದು ಕನ್ನಡ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ನಿರ್ದೆಶಕ ಪುಟ್ಟಣ್ಣ ಕಣಗಲ್ ನಾಗರಹಾವು ಚಿತ್ರ ನೀಡಿದಾಗ ಕನ್ನಡ ಚಿತ್ರರಂಗ ಅಷ್ಟೆ ಅಲ್ಲ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡಿತು. ಅದೇ ಚಿತ್ರವನ್ನು ಹಿಂದಿಯಲ್ಲಿ ನಿರ್ದೆಶನ ಮಾಡಿಕೊಡಲು ದುಂಬಾಲು ಬಿದ್ದರು. “ಜೆಹರೀಲಾ ಇನ್ಸಾನ್” ಹೆಸರಿನ ಮೂಲಕ ಪುಟ್ಟಣ್ಣ ಹಿಂದಿ ಚಿತ್ರ ನಿರ್ದೆಶನ ಮಾಡಿಕೊಟ್ಟರು. ಮುಂದೆ ಇವರದೆ ಪಡುವಾರಳ್ಳಿ ಪಾಂಡವರು ಹಿಂದಿಗೆ “ಹಮ್ ಪಾಂಚ್” ಹೆಸರಿನಲ್ಲಿ ತುರ್ಜುಮೆಗೊಂಡಿತು. ಇವರಲ್ಲದೆ ಅನೇಕ ನಿರ್ದೆಶಕರು ಹಿಂದಿ ಅಲ್ಲದೆ ಬಹಳಷ್ಟು ಭಾಷೆಯ ಚಿತ್ರಗಳನ್ನು ನಿರ್ದೆಶನ ಮಾಡಿದ್ದಾರೆ. ಬೇರೆ ಭಾಷೆಯಿಂದ ಅನೇಕ ಪ್ರತಿಭಾವಂತ ನಿರ್ದೆಶಕರು ಕನ್ನಡಕ್ಕೆ ಅದೇಷ್ಟೊ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದಾರೆ.
          ಈ ಆತ್ಮೀಯ ಬಾಂಧವ್ಯ ಚಿತ್ರರಂಗದಲ್ಲಂತೂ ಮೊದಲಿನಿಂದ ಬೆಳೆದುಕೊಂಡು ಬಂದಿದೆ. ಹೀಗೆ ಮುಂದುವರೆಯುತ್ತದೆ ಅನ್ನುವುದರಲ್ಲೇನು ಅಚ್ಚರಿಯಿಲ್ಲ. ಆದ್ರೆ ಈ ರೀತಿಯ ಮಧುರ ಬಾಂಧವ್ಯ ಬೇರೆ ಕ್ಷೇತ್ರಗಳಲ್ಲೂ ಆದ್ರೆ ಅದೊಂದು ಅದ್ಭುತ ಬದಲಾವಣೆ ಬೆಳವಣಿಗೆಯ ದೃಷ್ಟಿಯಿಂದ. ನೀವೇನಂತೀರಾ ?