ದೇಶ ಸೇವೆ, ಜನ ಸೇವೆ ಮಾಡುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕರೂ ಉಪಯೋಗಕ್ಕಿಂತ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವವರೇ ಹೆಚ್ಚು. ಆದರೆ ಪುಣ್ಯವಂತರು ಮಾತ್ರ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಆ ಕೆಲಸಕ್ಕೆ, ಆ ಇಲಾಖೆಗೆ, ತಮ್ಮ ಕುಟುಂಬಕ್ಕೇ ಮೇಲಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ.
ಸೇವಾ ನಿಷ್ಠೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಸಾಕ್ಷಿಯಾಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿ ಇಂದು ಗೌರವಪೂರ್ವಕವಾಗಿ ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ ಪಿಎಸ್ಐ ಅಧಿಕಾರಿ ಚಿತ್ರಶೇಖರ್ ಎಸ್. ಹೆಬ್ಬಾಳ.
ಚಿತ್ರಶೇಖರ್ ಎಸ್. ಹೆಬ್ಬಾಳ ಇವರು 1962ರ ಜೂನ್ 5ರಂದು, ಸಿದ್ದಣ್ಣಾ ಎಸ್. ನಂಜಾಗೋಳ ಮತ್ತು ಅಣವೀರಮ್ಮ ಎಸ್. ನಂಜಾಗೋಳ ದಂಪತಿಗಳ ಹಿರಿಯ ಮಗನಾಗಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಜನಿಸಿದರು. ಇವರ ನಂತರ ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ಕು ಜನ ಹೆಣ್ಣುಮಕ್ಕಳು ಜನಿಸುತ್ತಾರೆ.
7 ಜನ ಮಕ್ಕಳನ್ನು ಪಡೆದ ಚಿತ್ರಶೇಖರ್ ಅವರ ತಂದೆ ಸಿದ್ದಣ್ಣಾ ಎಸ್. ನಂಜಾಗೋಳ ಅವರು ಆ ಸಮಯದಲ್ಲಿ ಹೆಬ್ಬಾಳ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಅಣವೀರಮ್ಮ ಅವರು ಗ್ರಹಿಣಿಯಾಗಿದ್ದು, ಈ ದೊಡ್ಡ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆ ಕೆಲಸದ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಮುಖ್ಯವಾಗಿ ಉತ್ತಮ ಸಂಸ್ಕಾರವನ್ನು ನೀಡಿದರು.
ಇಂಥ ಸುಂದರ ಸುಸಂಸ್ಕೃತ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಚಿತ್ರಶೇಖರ್ ಅವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಹೆಬ್ಬಾಳ ಗ್ರಾಮದಲ್ಲಿ ಪೂರೈಸಿದರು. ನಂತರ ಪಿಯುಸಿ ಶಿಕ್ಷಣಕ್ಕಾಗಿ ಕಲ್ಬುರ್ಗಿ ನಗರಕ್ಕೆ ಆಗಮಿಸುತ್ತಾರೆ. ಇಲ್ಲಿನ ಪ್ರತಿಷ್ಠಿತ ಎಸ್.ಬಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದರು.
ಇದಾದ ನಂತರ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಶಂಕ್ರಪ್ಪ ಮತ್ತು ಈರಮ್ಮ ನಾಗೂರ್ ದಂಪತಿಗಳ ಪುತ್ರಿಯಾದ ಇಂದುಮತಿಯನ್ನು 1986 ಜುಲೈ 16ರಂದು ಮದುವೆಯಾದರು. ಆಗ ಸಂಸಾರದ ಬಂಡಿ ಸಾಗಿಸಲು ಚಿತ್ರಶೇಖರ್ ಅವರು ಒಂದು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.
ಚಿತ್ರಶೇಖರ್ ಮತ್ತು ಇಂದುಮತಿ ದಂಪತಿಗಳಿಗೆ ವಾಣಿಶ್ರೀ ಹಾಗೂ ವೀಣಾಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳು ಮತ್ತು ಶಶಿಕುಮಾರ ಹಾಗೂ ಕಿರಣಕುಮಾರ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ಈ ಮಕ್ಕಳಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ತೋರದೆ ಸರ್ಕಾರಿ ಹುದ್ದೆಯಿಂದ ಬರುವ ಸಂಬಳದಲ್ಲಿಯೇ ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದರೊಂದಿಗೆ ನಾಲ್ಕು ಜನ ಮಕ್ಕಳಿಗೂ ಇಂಜಿನಿಯರಿಂಗ ಶಿಕ್ಷಣ ನೀಡಿದರು. ಇವರ ಎಲ್ಲ ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿ ಇದ್ದು, ಚಿತ್ರಶೇಖರ ಹಾಗೂ ಇಂದುಮತಿ ಹೆಬ್ಬಾಳ ದಂಪತಿಗಳ ಕೀರ್ತಿಗೆ ಪಾತ್ರರಾಗಿದ್ದಾರೆ.
ಹೆಣ್ಣು ಮಕ್ಕಳಾದ ವಾಣಿಶ್ರೀ ಅವರನ್ನು ಮಂಜುಕುಮಾರ್ ಇಂಡಿ ಅವರಿಗೆ ಹಾಗೂ ವೀಣಾಶ್ರೀ ಅವರನ್ನು ಹರೀಶ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಅಲೋಕ್, ಅನ್ವಿತಾ, ಅದಿತಿ ಹಾಗೂ ಅದ್ವಿಕ್ ಎಂಬ ನಾಲ್ಕು ಜನ ಮೊಮ್ಮಕ್ಕಳಿದ್ದಾರೆ.
ಮದುವೆಯಾದ ಎರಡು ವರ್ಷದ ನಂತರ ಚಿತ್ರಶೇಖರ್ ಅವರು ಪೊಲೀಸ್ ಇಲಾಖೆಯ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಿದರು. 1988 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿ, ಒಂದು ವರ್ಷ ಕಾಲ ಚನ್ನಪಟ್ಟಣದಲ್ಲಿ ತರಬೇತಿ ಪಡೆದರು. ನಂತರ ತಮ್ಮ ಪೊಲೀಸ್ ಕಾನ್ಸ್ಟೇಬಲ್ ವೃತ್ತಿಯನ್ನು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಪ್ರಾರಂಭಿಸಿದರು.
ಶಹಾಪೂರ ಪೊಲೀಸ್ ಠಾಣೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಇವರು ಶೋರಾಪೂರ ತಾಲೂಕಿಗೆ ವರ್ಗವಾಗಿ ಅಲ್ಲಿಯೂ ನಾಲ್ಕು ವರ್ಷಗಳನ್ನು ಪೂರೈಸಿ, ಗುರುಮಠಕಲ್ ಗ್ರಾಮಕ್ಕೆ ವರ್ಗಾವಣೆಗೊಂಡರು. ಅಲ್ಲಿ 7 ವರ್ಷ ಸೇವೆ ಸಲ್ಲಿಸಿ ಶಹಾಪೂರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳನ್ನು ಪೂರೈಸಿದರು.
ಸೇವಾನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಪೋಲಿಸ್ ಪೇದೆಯಾಗಿ 18 ವರ್ಷಗಳನ್ನು ಪೂರ್ಣಗೊಳಿಸಿದ ನಂತರ 2006ರಲ್ಲಿ ಮುಖ್ಯ ಪೇದೆ ಹುದ್ದೆಗೆ ಬಡ್ತಿ ಹೊಂದುತ್ತಾರೆ. ಶಹಾಪೂರ ಪಟ್ಟಣ ಹಾಗೂ ವಡಗೇರಿ ಗ್ರಾಮದ ಪೋಲಿಸ್ ಠಾಣೆಗಳಲ್ಲಿ ಮುಖ್ಯಪೇದೆ ಯಾಗಿ 11 ವರ್ಷ ಸೇವೆ ಸಲ್ಲಿಸಿದರು.
ತದನಂತರ 2017ರಲ್ಲಿ ಎ.ಎಸ್.ಐ ಹುದ್ದೆಗೇರಿ ಗುರುಮಠಕಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಎ.ಎಸ್.ಐ. ಹುದ್ದೆಯಲ್ಲಿರುವಾಗಲೇ ಚಿತ್ರಶೇಖರ್ ಅವರು ಪಿ.ಎಸ್.ಐ ಹುದ್ದೆಗೆ ಪರೀಕ್ಷೆ ಬರೆದರು. ಮುಂದೆ ಎ. ಎಸ್.ಐ. ಹುದ್ದೆಯನ್ನು 5 ವರ್ಷ ಪೂರ್ಣಗೊಳಿಸಿದ ಬಳಿಕ ಕಳೆದ ವರ್ಷ ಅಂದರೆ 2021ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದರು. ಮೈಸೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಒಂದು ತಿಂಗಳ ತರಬೇತಿ ಪಡೆದು, ಶೋರಾಪೂರ ಪಟ್ಟಣದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಪಿ. ಎಸ್.ಐ. ಹುದ್ದೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಚಿತ್ರಶೇಖರ್ ಅವರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ರೀತಿಯ ಆಸೆ ಆಕಾಂಕ್ಷೆಗಳಿಗೆ ಮನಸ್ಸನ್ನು ಕೇಂದ್ರೀಕರಿಸದೆ, ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕವಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ.
ಸಣ್ಣಪುಟ್ಟ ಜಗಳಗಳಿಗಾಗಲಿ, ಮನೆಯ ಹಲವಾರು ಸಮಸ್ಯೆಗಳಿಗಾಗಲಿ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಸಹಜ. ಚಿತ್ರಶೇಖರ್ ಅವರು ಕರ್ತವ್ಯದಲ್ಲಿದ್ದಾಗ ತಮ್ಮ ಬಳಿ ಅಣ್ಣ-ತಮ್ಮಂದಿರು, ಸೋದರ ಸಂಬಂಧಿಗಳು, ಕುಟುಂಬದ ಕಲಹ, ನೆರೆಹೊರೆಯವರ ಜಗಳ ಹೀಗೆ ಸಣ್ಣ ಪುಟ್ಟ ಜಗಳಗಳನ್ನು ಮಾಡಿಕೊಂಡು ಪೊಲೀಸ್ ಠಾಣೆಗೆ ಧಾವೆ ಹೂಡಲು ಬರುವ ಜನರನ್ನು ಸಮಾಧಾನಪಡಿಸಿ, ಅವರ ವಿರುದ್ಧ ಎಫ್.ಐ.ಆರ್ ದಾಖಲಿಸದೆ, ವಾದ ಪ್ರತಿವಾದಿಗಳನ್ನು ಠಾಣೆಗೆ ಕರೆಯಿಸಿ, ತಿಳುವಳಿಕೆ ಹೇಳಿ, ರಾಜಿ ಸಂಧಾನ ಮಾಡಿಸಿ ಕಳುಹಿಸುತ್ತಿದ್ದರು.
ಕೆಲವೊಂದು ಸಂದರ್ಭಗಳಲ್ಲಿ ಬಡವರು, ದೀನ ದಲಿತರು, ನಿರ್ಗತಿಕರು ಪೊಲೀಸ್ ಠಾಣೆಗೆ ಬಂದು, ಊಟಕ್ಕಾಗಿ ಅಥವಾ ತಮ್ಮ ಊರಿಗೆ ಮರಳಿ ಹೋಗಲು ಹಣವಿಲ್ಲದೆ ಪರದಾಡುತ್ತಿದ್ದರೆ, ಅಂಥವರನ್ನು ಕಂಡು ತಮ್ಮ ಜೇಬಿನಿಂದ ಹಣ ತೆಗೆದು, ಊಟೋಪಚಾರ ಮಾಡಿಸಿ, ಊರಿಗೆ ಹೋಗಲು ಬಸ್ಸಿನ ಖರ್ಚನ್ನು ಭರಿಸಿ, ಕಳುಹಿಸುತ್ತಿದ್ದರು.
ಕರೋನಾದ 2ನೇ ಅಲೆಯಿಂದ 2021ರಲ್ಲಿ ದೇಶದಲ್ಲಿ ಎರಡನೇ ಸಲ ಲಾಕ್ಡೌನ್ ಘೋಷಿಸಲ್ಪಟ್ಟಾಗ ಚಿತ್ರಶೇಖರ್ ಅವರು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಇಟಕಲ ಕ್ರಾಸ್ ಸಮೀಪದ, ಗುರುಮಠಕಲ್ ಹೈದರಾಬಾದ್ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ನಿಲ್ಲಿಸಿ ಹಣ್ಣು-ಹಂಪಲುಗಳನ್ನು ನೀಡಿ, ಮಾಸ್ಕ್ ವಿತರಿಸಿ, ಅನಗತ್ಯವಾಗಿ ರಸ್ತೆ ಮೇಲೆ ಸಂಚರಿಸಿದೆ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಬುದ್ಧಿ ಮಾತು ಹೇಳಿ ಕಳುಹಿಸಿದ ಘಟನೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಇಂಥ ಪ್ರಾಮಾಣಿಕ, ದಕ್ಷ, ಮಾನವೀಯ ಗುಣವುಳ್ಳ ಪೊಲೀಸ್ ಅಧಿಕಾರಿಯಾದ ಶ್ರೀ ಚಿತ್ರಶೇಖರ್ ಎಸ್. ಹೆಬ್ಬಾಳ ಅವರು ಪೊಲೀಸ್ ಇಲಾಖೆಯಲ್ಲಿ ತಮ್ಮ ಸುದೀರ್ಘವಾದ 34 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯಾಗಿದ್ದಾರೆ. ಅವರ ಸೇವೆಗೆ ಇಂದು ನಿವೃತ್ತಿಯಾಗಿರಬಹುದು. ಆದರೆ ಅವರ ಸೇವಾ ಅವಧಿಯಲ್ಲಿ ಮಾಡಿದ ಎಲ್ಲಾ ಕೆಲಸ ಕಾರ್ಯಗಳು ನಮ್ಮೆಲ್ಲರಿಗೆ ಪಾಠವಾಗುತ್ತದೆ. ಚಿತ್ರಶೇಖರ್ ಎಸ್. ಹೆಬ್ಬಾಳ ಎಂಬ ಹೆಸರು ಕೇಳಿದ ಕೂಡಲೆ ನಾವೆಲ್ಲ ಹೆಮ್ಮೆಯಿಂದ ಬೀಗುತ್ತೇವೆ. ಅವರಂತೆ ನಾವೂ ಆಗಬೇಕೆಂಬ ಪ್ರೇರಣೆ ಸಿಗುತ್ತದೆ. ಅವರಂತಹ ಮಾನವೀಯ ಗುಣ ನಮ್ಮಲ್ಲೂ ಮೂಡುತ್ತದೆ. ಇದೇ ಅಲ್ಲವೇ ಸಾರ್ಥಕ ಬದುಕು. ಸಾಧನೆ ಬದುಕು.
ಇಂಥ ಬದುಕು ನಡೆಸಿ ಸಜ್ಜನಿಕೆ, ಪ್ರಾಮಾಣಿಕತೆ, ಪ್ರೀತಿ, ಮಾನವೀಯತೆಗೆ ಹೆಸರಾದ ಪಿ.ಎಸ್.ಐ ಅಧಿಕಾರಿ ಚಿತ್ರಶೇಖರ್ ಎಸ್. ಹೆಬ್ಬಾಳ ಅವರ ಮುಂದಿನ ನಿವೃತ್ತಿಯ ಜೀವನ ಸುಖ ಸಂತೋಷ ಸಮೃದ್ಧಿಯಿಂದ ಕೂಡಿರಲಿ. ದೇವರು ಅವರಿಗೆ ಆಯುರಾರೋಗ್ಯವನ್ನು ಕರುಣಿಸಿ ಕಾಪಾಡಲಿ ಎಂದು ನಾವು ನೀವೆಲ್ಲ ಸೇರಿ ಆ ದೇವರಲ್ಲಿ ಪ್ರಾರ್ಥಿಸೋಣ ಮತ್ತು ಹೃದಯಾಂತರಾಳದಿಂದ ಶುಭ ಹಾರೈಸೋಣ.
-ಗೋವಿಂದರಾವ್ ಎನ್.
ರಾಥೋರ್