ಜೂನ್ 22, 2020

ಹರಕೆಯ ಕುರಿ




        ಅಂಗುಳ್ ತುಂಬಾ ನೆಳ್ಳು ಹರುವುಕೊಂಡು ಝುಂಪುಳ್ ಆಗಿದ್ದ ಬೇಯಿನ್ ಮರ ತಂಪು ಸುರೀತಾ ಬೆಳೆದು ನಿಂತಾದ. ಅದುರ್ ಕೆಳಗ ಕುರ್ರ್... ಕುರ್ರ್... ಅವಾಜ್ ಮಾಡ ಮುರುಕು ಹೊರಸಿನ ಮ್ಯಾಲ್ ಭೀಮಣ್ಣ ಮುತ್ತ್ಯಾ ಕಾಲು ಮಡಚಿ, ತೆಲಿ ಬುಡುಕ ಬಲಗೈ ಇಟ್ಟುಕೊಂಡು ಏನೋ ಚಿಂತಿ ಒಳಗ ಅಡ್ಡಾಗಿದ್ದ. ಅಲ್ಲೆ ಛಪ್ಪುರ್ ಗುಂಜಿಗಿ ಕಟ್ಟಿದ ಕುರಿಮರಿ ತನ್ನ ಪಾದ ನೆಕ್ಕದು ಗೊತ್ತಾಗಿ ಚಿಂತಿಯೊಳಗಿಂದು ಹೊರಗ ಬಂದು ಮ್ಯಾಲೆದ್ದು ಕುಂತ. ಹಣಿಮ್ಯಾಲ್ ಕೈಇಟ್ಟುಕೊಂಡು ಬೇಯಿನ್ ಮರದ ತಪ್ಪುಲ್ ಒಳಗಿಂದು ಸೂರ್ಯನಿಗಿ ನೋಡ್ದ. ಬ್ಯಾಸ್ಗಿ ಸೂರ್ಯ ನೆತ್ತಿಮ್ಯಾಲಿಂದು ಸರ್ದು ಬಾಜು ಬಂದಿದ್ದ.

 

          ಕುರಿಮರಿ ಎಡ್ಡ್ ಸಲ ಒದರಿ ಅವನಕಡಿಗಿ ನೋಡ್ತು. ಹೊರಸಿನ್ ಮ್ಯಾಲಿಂದು ಎದ್ದು ಆಕಡಿ ಈಕಡಿ ನೋಡ್ದ. ಬೇಯಿನ್ ಮರದ ನೆಳ್ಳಿಗಿ ಮುಂಜಾನಿ ಹೊಲಕ್ಕ್ ಹೋಗಿ ತಂದಿದ್ದ ಆರಿ ತಪ್ಪುಲು ಒಂದು ಹಿಡ್ಕಿ ಹಿಡ್ಕೊಂಡು ಒಯ್ದು ಅದುರ್ ಮುಂದಿನ್ ಗುಂಜಿಗಿ ಕಟ್ಟಿದ. ಹಸ್ದಿದ್ದ ಕುರಿಮರಿ ಆರಿ ತಪ್ಪುಲು ಕಡಕೊಂಡು ತಿಲ್ಲತುತು. ಅಲ್ಲೆ ಕುಂತು ಅದರ ನುಣ್ಣನ ಮೈ ಒರೆಸ್ದ. “ಛಂದ್ ತಿಂದಿ ಝಲ್ದಿ ಧಮ್ ಆಗು. ನುಣ್ಣುಗ್ ಬೆಳ್ದಿ ಅಂದುರ ಪಿರೆ ಮಾರ್ತಿ. ತೋಲೆ ರೊಕ್ಕ ಬಂದ್ವು ಅಂದ್ರ ನಾ ಬಂಬೈಗಿ ಹೋಗಿ ನನ್ನ್ ಮಗನ್ ಮಾರಿ ನೋಡ್ತಿನಿ. ನನ್ ಆಸಿ ನಡಿಸಿಕೊಡೊದು ನಿನ್ ಮ್ಯಾಲೆ ಅದ ! ಅವ್ನಿಗೇ ಬಂಧ್ಹೋಗೋ ಮಗಾ ಅಂದ್ರ ’ನನ್ಗ ಬರ್ಲಾಕ ಪುರ್ಸತ್ಗಿನೆ ಇಲ್ಲೊ ಯಪ್ಪ. ಧಂದ್ಯಾ ಪೂರಾ ನನ್ ಮ್ಯಾಲೆ ಅದಾ. ಯಾಕಂದ್ರ ಆಪೀಸ್ನಾಗ ನಾನೆ ದೊಡ್ದಾಂವಿದ್ದಿನಿ. ಹಂಗೆಲ್ಲ ಬಿಟ್ಟಿ ಬರ್ಲಾಕ್ ಬರಲ್ಲ. ಬೇಕಾದ್ರ ನೀನೆ ಬಂದು ಹೋಗು’ ಅಂದಾನ. ಸರ್ರ್... ಅಂತ ಹೋಗ್ಲಾಕ ಬಂಬೈ ಶ್ಯಾರ್ ಏನು ಇಲ್ಲೆ ಕೂಗಳ್ತ್ಯಾಗದಾನ. ಎಲ್ಲೋ ಸಮ್ದೂರು ಬಲ್ಲ್ಯಾಕ್ ಅದಾ ಅಂತ. ಅಲ್ಲಿಗಿ ಹೊಗ್ಲಾಕ ಪೂರಾ ಒಂದ್ ದಿನಾನೆ ಬೇಕಂತ. ಏನ್ ಮಾಡ್ಲಿ ವೊಟು ದೂರ್ ಅದಾ. ಮತ್ತ ಮೊಟಾರ್ ಗಾಡಿಗಿ ಕಿರಾಯಿಯೇನು ಹತ್ತಿಪ್ಪತ್ತು ರೂಪಾಯಿ ಇರ್ತದ... ಅದಲ್ದೆ ಮಗನ್ ಬಲ್ಲಿಕಿ ಹೊಟಿನಂದ್ರ ಹಂಗೇ ಖಾಲಿ ಕೈಲಿ ಹ್ಯಾಂಗ್ ಹೋಗ್ಲಿಕ್ಕಿ ಬರ್ತದ. ಏನರ ಒಯ್ಲಕ್ಕ ಒಂದೀಸು ಹೆಚ್ಚಿಗೇ ರೊಕ್ಕ ಬೇಕೇ ಆಗ್ತಾವ. ಅದೆಲ್ಲಾ ಬರಾಬರಿ ಆಗ್ಬೇಕಂದ್ರ ನಿನಗ ಮಾರ್ಬೇಕು. ಪಿರೆ ಮಾರ್ಬೇಕು ! ಅದ್ಕೆ ನಿನ್ಗ ಸಲುವಿನಿ”. ಮನಸಿನ್ಯಾಗಿನ್ ಮಾತು ಛೊಲೋ ಜೊರಿಲೆ ಬಂದಿದ್ವು. ಒಂದ್ಸಲ ಕುರಿ ಮರಿ ಇವನ ಮಾರಿ ನೋಡಿ ಸುಮ್ಮನಾಯ್ತು.

 

ಎದುರ ಹಾದಿಗುಂಟಾ ಹೊಲಕ್ಕ ಹೊಂಟಿದ್ದ ಬಾಜು ಮನಿ ಬುದರೇರು ಬಕ್ಕಪ್ಪಾ ಒಬ್ನೆ ಮಾತಾಡ್ತಿದ್ದ ಭೀಮಣ್ಣಗ ನೋಡಿ ಮೂಗಿನಾಗೆ ನಗ್ತಾ ”ಏನೋ ಭೀಮಣ್ಣಾ ! ಕುರಿಮರಿ ಸಂಗಾಟ ಏನೋ ಛೋಲೊನೆ ಮಾತು ಹೇಳ್ಲತ್ತಿದಿ....” ಅಂತ ಅನ್ಕೋತಾ ಬಂದು ಹೊರಸಿನ ಮ್ಯಾಲ ಕುಂತು ಅಂಗಿಯೊಳಗಿನ ಬನೀನ್ ಕಿಸ್ಯಾದಾಗಿಂದು ಚುಟ್ಟದ ಎಲಿ ತೆಗೆದ.

          “ಬಾರೋ ಬಕ್ಕಪ್ಪಾ ಬಾ, ಕುಂದುರ್ರು... ಏನ್ ಮಾಡ್ಲಿ ! ಮಗಾ ಬಂಬೈಗಿ ಹೋಗಿ ಐದು ವರ್ಷ ಆಗ್ಲಾಕ್ ಬಂತು ಈ ಹೋಳಾ ಹುಣ್ಣಿಗಿ. ಅವ್ನಿಗಿ ಬಾ ಅಂದ್ರ ಹಾಪಿಸ್ ಕೆಲ್ಸ ಬಿಟ್ಟು ಬರ್ಲಾಕ್ ಆಗಲ್ಲಂತಾನ. ನಾನೆ ಹೋಗ್ಬೇಕಂದ್ರ ಏನ್ ಸನಿ ಊರಾ... ಈಗಿನ ಕಾಲ್ದಾಗೇನು ಹೋಗಿ ಬರ್ಲಾಕ ಛೋಲೊನೆ ಸವಲತ್ತದ. ಆದ್ರ ರೊಕ್ಕ ಬೇಕಲ್ಲಪ್ಪಾ. ಅದ್ಕೆ ನೋಡು ಈ ಕುರಿಮರಿ ಸಲುವಿನಿ” ಅಂತಂದ ಭೀಮಣ್ಣ ಕುರಿಮರಿ ಮುಂದಿಂದು ಎದ್ದು ಹೊರಸಿನ ಮ್ಯಾಲ ಬಕ್ಕಪ್ಪನ ಬಾಜು ಬಂದು ಕುಂತ.

 

          ಚುಟ್ಟದಾಗ ತಂಬಾಕು ತುಂಬುತ್ತ ಬಕ್ಕಪ್ಪಾ “ಹೂಂ ಛೋಲೊ ಹಿಕಮತಿನೆ ಮಾಡಿದಿ... ಕುರಿಮರಿನೂ ಎಣ್ಣ್ಯಾಗ್ ತೋಳದಂಗ್ ನುಣ್ಣುಗ್ ಅದಾ. ಇನ್ನೊಂದು ಥೊಡೆ ದಿನ ಹಂಗೆ ಬೆಳ್ಸು ದೋನ್-ತೀನ್ ಹಜಾರ್ಕರ ಮಾರ್ತದ...” ಅಂತಂದ.

 

          ಅನುಮಾನದಿಂದ ಭೀಮಣ್ಣ “ಅಂದ್ರ ಇಷ್ಟು ರೊಕ್ಕದಾಗ ಹೊಗಾಬರಾ ಖರ್ಚಾ ಬರಾಬರಿ ಆಗ್ತದಂತಿ”” ಅಂತ ಕೇಳಿದಕ್ಕ “”ಏಯ್ ಮನಾರ್ ಆಯ್ತಾವೊ ಭೀಮಣ್ಣಾ ಬರಾಬ್ಬರೀ ಆಯ್ತವ. ಅದ್ರಾಗ್ ಮತ್ತ್ ನೀ ಮಗನಿಗಿ ಏನರ ತೊಕೊಂಡು ಹೋಗ್ಲಾಕ ಒಂಥೊಡೆ ರೂಪಾಯ್ನೂ ಉಳಿತಾವ... ಏನ್ ಅಂಜಬ್ಯಾಡ” ಅಂತಂದಾಗ ಭೀಮಣ್ಣನ ಎದಿಮ್ಯಾಲಿನ ಕಲ್ಲು ಎತ್ತಿಟ್ಟಂಗಾಯ್ತು.

 

          ಬಕ್ಕಪ್ಪನ ತಲ್ಯಾಗ ಮತ್ತೆನೋ ವಿಚಾರ ಹೊಳ್ದು “ಇನ್ನೊಂದೋ ಭೀಮಣ್ಣ, ನೀ ಈ ಬಸ್ಸಿಗಿಸ್ಸಿಗಂತ ಹೋಗ್ಲಕ ಹೋಗ್ಬ್ಯಾಡ. ಇಲ್ಲಿಂದ ಕಲ್ಬುರ್ಗಿ ತನಕ ಆದುರ್ ಬಸ್ಸಿಗಿ ಹೋಗು. ಆದ್ರ ಕಲ್ಬುರ್ಗಿಲಿಂದ ರೈಲ್ಗಾಡಿಗೆ ಹೋಗು. ಯಾಕಂದ್ರ ರೈಲ್ಗಾಡಿಗಿ ಕಿರಾಯಿ ಬಸ್ಸಿಗಿಂತ ಭಾಳ್ ಕಮ್ಮಿರ್ತದಂತೋ... ಬಸ್ಸಿಗಿ ಹ್ವಾದಿ ಅಂದ್ರ ಪೂರಾ ರೊಕ್ಕ ಅದಕ್ಕೆ ಬಡಿಬೇಕು !” ಅಂದಾಗ ಭೀಮಣ್ಣಗ ಭಾಳ ಸಮಾಧಾನ ಆಯ್ತು. ಇಷ್ಟು ಹೇಳಿ ಬಕ್ಕಪ್ಪ ಹೊರಸಿನ ಮ್ಯಾಲಿಂದು ಎದ್ದು “ಭೀಮಣ್ಣ, ನಾ ಜರಾ ಹೊಲದಕಡಿ ಹೋಗಿ ಬರ್ತಿನಿ” ಅಂತಂದು ಹೊಂಟ.

 

“ಹ್ಞೂಂ ಹೋಗಿ ಬಾ” ಅಂತ ಬಕ್ಕಪ್ಪನ್ನ ಕಳಿಸಿ ತಾನೂ ಮ್ಯಾಲೆದ್ದು ಒಂದು ಸಣ್ಣ ಬುಟ್ಟಿಯೊಳಗ ನೀರು ತೊಕೊಂಡು ಬಂದು ಕುರಿಮರಿ ಮುಂದ ತಂದಿಟ್ಟ. ಮುಂದ ಹಾಕಿದ್ದ ಆರಿತಪ್ಪುಲು ಪೂರಾ ತಿಂದು ನೀರಡಿಸಿದ್ದ ಕುರಿಮರಿ ’ಜೊರ್ರ್... ಜೊರ್ರ್...’ ಅಂತ ಹೊಟ್ಟಿತುಂಬ ನೀರು ಕುಡಿದು ಸಮಧಾನಗೊಂಡು ಕುಂದುರ್ತು. ಭೀಮಣ್ಣಾನೂ ಅಲ್ಲಿಂದ ಮತ್ತ ಹೋಗಿ ಹೊರಸಿನ ಮ್ಯಾಲ ಕುಂತು ಏನೋ ವಿಚಾರದಾಗ ಮುಣುಗಿ ಹೋದ.

          ಮಂದಿ ಅಂತಾರ ಈಗ ಕಾಲಾ ಪೂರಾ ಬದಲಾಗಿ ಬಿಟ್ಟಾದ. ಹಿಂದಿನ್ಹಂಗ ಎದುಕ್ಕೂ ಕಷ್ಟ ಪಡೋದು ಬೇಕಾಗಿಲ್ಲ ಅಂತ. ಜಗತ್ತಿನ ಯಾವುದೋ ಮೂಲ್ಯಾಗ ಏನೋ ಆಗಿದ್ದನ್ನ ಟಿವಿದಾಗ ತೋರಿಸ್ತಾರ. ದೂರ ಊರಾಗಿದ್ದೋರ್ ಗುಡಾ ಫೊನ್ನಾಗ ಮಾತಾಡಕ್ಕ ಬರ್ತದ. ನಮ್ಮೂರಾಗೂ ಆ ಮಾಸ್ಟರ್ ಸಾಬುರ್ ಮನ್ಯಾಗ ಟಿವಿ, ಫೋನು ಅವ. ಅವ್ರ ಟಿವ್ಯಾಗ ನಾಕೈದು ಖೆಪಿ ನಾ ಚಿತ್ರಾ ನೋಡಿನಿ, ಅವು ಮಾತೂ ಆಡ್ತಾವ ! ಅವ್ರ ಫೋನಿನಾಗ ನನ್ನ ಮಗನ ಗೂಡ ಮೂರು ಸಲ ಮಾತಾಡಿನಿ. ಅಕಡಿಂದು ಅಂವ “ನಾ ಎಲ್ಲ ಛೊಲೊ ಇದ್ದಿನಿ... ನಿ ಏನ್ ಕುದಿ ಮಾಡಬ್ಯಾಡ... ನೀ ಛಂದಿರು” ಅಂತ ಹೇಳಿ ಗಪ್ಪಾದ. ನಾನು ಮಗನ ಗೂಡ ಮಾತಾಡಬೇಕಂತ ಬಾಯಿ ತೆಗ್ದುರ ಅಂವಾ ಅಲ್ಲಿ ಫೊನೆ ಇಟ್ಟಿನಂತ. ಅದೂ ಮಾಸ್ಟರ್ ಸಾಬೂರ್ ಮೊಮ್ಮಗಳು ಚಿನ್ನು ನನ್ನ ಕೈಯಾಗಿಂದು ಫೊನ್ ಕಸ್ಕೊಂಡು ತನ್ನ ಕಿವಿಗಿಟ್ಟುಕೊಂಡು ಹೇಳಿದ್ ಮ್ಯಾಗ್ ನನಗ ಗೊತ್ತಾಯ್ತು.ಮನಸಿಗಿ ತೋಲು ಬ್ಯಾಸರಾಯ್ತು. ಅಲ್ಲಾ ಇವೆಲ್ಲ ಬಂದು ಯಾರಿಗಿ ಒಂದು ಮಾಡ್ಲತಾವ ? ಅಂತ ತನ್ನ ಮನಸಿನೊಳಗೆ ಪ್ರಶ್ನೆ ಹಾಕ್ಕೊಂಡ. ಆದ್ರ ಉತ್ರ ಅವನಿಗಿ ಗೊತ್ತಿತ್ತು...!

 

          ಇದೆ ವಿಚಾರದಾಗ ಹೊತ್ತ್ ಮುಣುಗಿದ್ದು ಭೀಮಣ್ಣಗ ಗೊತ್ತಾಗಿ ಎದ್ದು ಕುರಿಮರಿಗಿ ಒಯ್ದು ಪಡಸಾಲ್ಯಾಗ ಕಟ್ಟಿ, ಉಳಿದಿದ್ದ ಆರಿ ತಪ್ಪುಲು ಒಯ್ದು ಅದರ ಮುಂದ ಗುಂಜಿಗಿ ಕಟ್ಟಿದ. ಅಲ್ಲೆ ಮಾಡದಾಗಿನ ಚಿಮಣಿ ತೊಕೊಂಡು ಅದಕ್ಕ ಬಂದಿದ್ದ ಕುಡಿ ತೆಗೆದು ದೀಪ ಹಚ್ಚಿ ಒಲಿಮುಂದ್ ಬಂದು ಕುಂತ. ಗಡಗಿ ತೆಗೆದು ನೋಡಿದ. ಮುಂಜಾನಿ ಮಾಡಿದ್ದ ಬ್ಯಾಳಿ ಇನ್ನಾ ಇತ್ತು. ರೊಟ್ಟಿ ಬುಟ್ಟ್ಯಾಗ ಭೆಳ್ಳನ ಪಾವಡದಾಗ ಸುತ್ತಿಟ್ಟಿದ್ದ ಎರಡ್ ರೊಟ್ಟಿ ತೊಗೊಂಡು ಗಂಗಾಳದಾಗ ಒಡಮುರ್ದು ಹಾಕಿ ಮ್ಯಾಲ ಬ್ಯಾಳಿ ಸುರ್ಕೊಂಡು ಉಂಡ. ಖರ್ರಾನ್ ಕರಮಸಿ ಆಗಿದ್ದ ಗಿಲಾಟಿನ ಬೊಗೊಣಿ ಎತ್ತಿ ಮುಸಿ ನೊಡ್ದ. “ಜರಾ ಮಾರಿ ಕಿಡಿಸ್ಯಾದ, ಇನ್ನೊಂಜರಾ ತಡ ಆಯ್ತಿತ್ತು ಅಂದ್ರ ಮುಸ್ರಿಗೇ ಹಾಕ್ಬೇಕಿತ್ತು” ಅಂದ್ಕೊಂಡು ಅದಿಷ್ಟು ಅನ್ನ, ಬ್ಯಾಳಿ ಕಲ್ಸ್ಕೊಂಡು ಹೊಟ್ಟಿ ತುಂಬ ಉಂಡ. ಗಂಗಾಳು, ಅನ್ನದ ಬೊಗೊಣಿ ಮತ್ತ ಬ್ಯಾಳಿ ಗಡಗಿ ತೊಳ್ದಿಟ್ಟು ಬಾಗುಲು ಮುಂದುಕ್ಕ ಮಾಡಿ ಹಣಮಂದೇವ್ರು ಗುಡಿ ಕಡಿಗಿ ಭಜನಿ ಹಾಕ್ಲಕಂತ ಹೊಂಟ.

 

          ರಾತ್ರಿ ಹನ್ನೆರಡು ಬಡಿಲಾಕ ಮನಿಗಿ ಬಂದು ಕುರಿಮರಿಗಿ ನೋಡ್ತಾನ. ಅದು ಮುದುಡಿಕೊಂಡು ಮಲಗಿತ್ತು. ಅಲ್ಲೆ ಘೂಟುಕ್ ಸಿಗ್ಸಿದ್ದ್ ಕಂಬ್ಳಿ ತೊಕೊಂಡು ಹೊರಗ ಅಂಗಳದಾಗ ಬಂದು ಹೊರಸು ಹಾಕ್ಕೊಂಡು ಮೊಕೊಂಡ. ಆದ್ರ ನಿದ್ದಿನೆ ಬರುವಲ್ದು. ಅವತ್ತೊಂದಿನ ಮಗಂದು ಫೋನ್ ಬರ್ತದೇನೋ ಅಂತ ಮಾಸ್ಟರ್ ಸಾಬೂರ್ ಮನಿಗಿ ಹೋಗಿದ್ದ. ಫೋನ್ ಬರಲಿಲ್ಲ. ಆದ್ರ ಮಾಸ್ಟರ್ ಸಾಬೂರು “ಈ ವಿಜ್ಞಾನ ಅನ್ನೊದು ಬೆಳೆದುಬಿಟ್ಟು ಜಗತ್ತನ್ನೊದು ಒಂದು ಸಣ್ಣ ಹಳ್ಳಿ ಆಗ್ಯಾದ” ಅಂದಿದ್ರು. ಅವರ ಮಾತೇನೋ ಖರೆ ಅದ ಆದ್ರ ಈ ಮನಸ್ಯಾನ ಮನಸ್ಸು, ಕರುಳಿನ ಸಂಬಂಧ, ತನ್ನೊರ್ ಮ್ಯಾಲಿನ ಮಾಯ-ಮಮತಾ ಇವೆಲ್ಲ ದೂರ ಅಂದ್ರ ದೂರ ಹೊಂಟ್ ಬಿಟ್ಟಾವ. ಇನ್ನೊಂದು ಥೋಡೆ ದಿನ ಆದ್ರ ಕಣ್ಣಿಗೂ ಕಾಣ್ಲಿಕ್ಕಿಲ್ಲ. ಮತ್ತ ನನ್ನ ಮಗಾನೂ ಇವೆಲ್ಲ ಬಿಟ್ಟು ದೂರ ನಡದಾನ. ಹಿಂಗೆ ಸಡ್ಲ ಬಿಟ್ರ ಒಂದಿನ ನನಗೆ ನೀ ಯಾರು ಅಂತ ಕೇಳಾ ಪೈಕಿ...! ಅಂವಾ ಅಂತೂ ಬರಲ್ಲ, ನಾನೇ ಅವನ ಬಲ್ಲಿಕಿ ಹೋಗ್ಬೇಕು.

 

          ನನಗ ಅಂವಾ ಬಿಟ್ರ ಯಾರ್ ಹರಾ. ತಾಳಿಕಟ್ಟಿದ್ದ ಹೆಣ್ತಿ ಮುತ್ತೈದಿ ಆಗಿ ಸಿವನ ಪಾದ ಸೇರಿ ತೆರಾ ವರ್ಷ ಆಯ್ತು. ಇರಾ ಒಬ್ಬ ಮಗನ ಗುಂಗಿನಾಗ ಗುಂಗಿ ಹುಳಧಂಗ ಗುಂಯಿ ಗುಂಯಿ ಅಲ್ಲತ್ತಿನಿ. ಇಲ್ಲರ ಇರೊದು ಒಂದು ಝೊಪಡಿ ಅಷ್ಟೆ. ದುಡ್ದುರ ಹೊಟ್ಟಿಗಿ ಸಿಗ್ತದ. ದುಡಿಲಿಲ್ಲ ಅಂದ್ರ ಬಿಟ್ಟಿ ಯಾರೂ ಕೊಡಲ್ಲ. ಈಗ ಪೈಲೆಧಾಂಗ ದುಡಿಲಾಕ ಕೈಕಾಲ್ದಾಗ ಸಗ್ತಿ ಅನ್ನೊದೂ ಇಲ್ಲ. ಎಲ್ಲಾ ಉಡುಗಿ ಹೋಗ್ಯಾದ. ಸಾಯ ಕಾಲಕ್ಕ ಮಗನ ಬಲ್ಯಾಕೆ ಇದ್ದು ಅವನ ಬಲ್ಲೆ ಜಿವಾ ಬಿಡ್ತಿನಿ. ನಂದು ಅದೊಂದೆ ಆಸಿ. ಈ ಕುರಿಮರಿ ಎಟುಕ್ಯಾಕ ಹೊಗುವಲ್ದು. ನಾಳಿ ಮುಂಜಾನಿ ಅದಕ್ಕ ಮಾರ್ಕೊಂಡು ಬಂದು ಬಂಬೈಗಿ ಹೋಗಬೇಕೆ ಅಂತ ಫೈಸ್ಲಾ ಮಾಡಿ ಕಣ್ಣ್ ಮುಚ್ಚಿದ. ಅವಾಗ ನಿದ್ದಿ ಅನ್ನೊದು ಜೇನು ನೋಣ ಜೇನಿಗಿ ಮುಕ್ಕರಿಧಂಗ ಬಂದು ಅವನ್ನ ಮುಕ್ಕರಿದ್ವು.

 

          ರಾತ್ರಿ ಕಳಿತು. ಮರುದಿನ ಛಂದೆ ಭೆಳಾರಾಗಿತ್ತು. ರಾತ್ರಿ ಕತ್ತುಲ್ ತನ ಎಚ್ಚರಕಿ ಇದ್ದ ಭೀಮಣ್ಣಗ ಮುಂಜಾನಿ ಏಳಕ್ಕ ಜರ ತಡಾನೆ ಆಗಿತ್ತು. “ಭಗವಾನ್ ಈಶ್ವರ” ಅಂತ ಮಾರಿ ಸವರ್ಕೊತಾ ಎದ್ದು ಹೊರಾಗ ಹೋಗಿ ಬಂದ್ ಮ್ಯಾಲ, ಅಂಗಳದಾಗಿನ್ ಬೆಯಿನ್ ಗಿಡದ ಕಡ್ಡಿ ಮುರ್ಕೊಂಡು ಹಲ್ಲು ತಿಕ್ಕೊತಾ ಬೊರಿಂಗಿಗಿ ಹೋಗಿ, ಒಂದು ಕೊಡ ನೀರು ತೊಕೊಂಡು ಬಂದು ಮಾರಿ ತೊಳ್ಕೊಂಡ. ಒಂದು ತೆಂಬಿಗಿ ತುಂಬಾ ತಂದಿದ್ ನೀರು ಗಟ ಗಟ ಅಂತ ಕುಡ್ದ. ಹೆಗಲ ಮ್ಯಾಲಿನ ಶಲ್ಯಲಿಂದ ಮಾರಿ ಸೂಟಕೊತಾ ‘ಕುರಿಮರಿಗರ ಹೊರಾಗ ತಂದು ಕಟ್ಟರಿ’ ಅಂತಂದು ಮನಿ ಒಳಗ ಬಂದು ನೋಡ್ತಾನ ! ಜಿವ ಧಸ್ ಅಂತು. ರಾತ್ರಿ ಘುಟುಕ್ ಕಟ್ಟಿದ್ದ್ ಕುರಿಮರಿನೇ ಇರಲಿಲ್ಲ.

ಜೂನ್ 18, 2020

ಅಪ್ಪ

ಅಪ್ಪ
ಎಲ್ಲಪ್ಪ...

ಅಲ್ಲಿ ಮುಳುಗಿದ ಸೂರ್ಯ
ಇಲ್ಲಿ ಮತ್ತೆ ಮೂಡಿಹನು
ಕತ್ತಲು ಕರಗಿಸಿ
ಬೆಳಕು ಅರಳಿಸಿಹನು...

ಹಾಗೆ
ನನ್ನ ಸೂರ್ಯ ಮುಳುಗಿ
ಮತ್ತೆ ಮೂಡಬೇಕಲ್ಲ !

ಅಪ್ಪ
ಬಾರಪ್ಪ !
ಕತ್ತಲು ಬೇಸತ್ತಿದೆ
ಬೆತ್ತಲಾಗಿ,
ತೊಡಿಸು ಬಾ ಬೆಳಕು.
ನಿದ್ದೆಯಿಲ್ಲದೆ ಮಲಗಿರುವೆ,
ಎಬ್ಬಿಸು ಬಾ ಕರೆದು
ಮಗನೇ....!

ಅಪ್ಪ‌
ಎಲ್ಲಪ್ಪ !

ಜೂನ್ 14, 2020

ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್

“ಧೋನಿ ದಿ ಅನ್‍ಟೊಲ್ಡ್ ಸ್ಟೋರಿ” ಸಿನಿಮಾ ಖ್ಯಾತಿಯ ಬಾಲಿವುಡ್‍ನ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.
ತಮ್ಮ ಅದ್ಭುತ ಅಭಿನಯದಿಂದ ಬಹಳ ಬೇಗನೆ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಖಾಸಗಿ ವಾಹಿನಿಯ ಅತ್ಯಂತ ಜನಪರೀಯಗೊಂಡ “ಪವಿತ್ರ ರಿಶ್ತಾ” ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಮಟ್ಟದ ಜನಪ್ರೀಯತೆ ಗಳಿಸಿದ್ದರು. “ಕೈ ಪೋ ಚೇ” ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು.
ತದನಂತರ ಬಿಡುಗಡೆಯಾಗಿದ್ದ “ಶುದ್ಧ್ ದೇಶಿ ರೊಮ್ಯಾನ್ಸ್” ಚಿತ್ರದಲ್ಲಿನ ನಟನೆ ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರ ವಾಗಿತ್ತು. ಇದಾದ ಮೇಲೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಚಲನಚಿತ್ರ “ಧೋನಿ ದಿ ಅನ್‍ಟೊಲ್ಡ್ ಸ್ಟೋರಿ”ಯÀಲ್ಲಿ ಧೋನಿ ಪಾತ್ರ ಮಾಡಿದರು. ಈ ಸಿನಿಮಾ ಸುಶಾಂತ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.
ಆದರೆ ಚಿತ್ರರಂಗದಲ್ಲಿ ಇನ್ನು ಬೆಳೆಯಬೇಕಾದ ಸಮಯದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ವಿಷಾದನೀಯ. ಆ ದೇವರು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಕ್ಕೆ ಶಾಂತಿ ನೀಡಲಿ.

ಅಕ್ಟೋಬರ್ 08, 2019


ಕಲಬುರಗಿ ಆಕಾಶವಾಣಿ ಈಗ ರೇಡಿಯೋನಲ್ಲಷ್ಟೆ ಅಲ್ಲ ನಿಮ್ಮ ಮೊಬೈಲ್ನಲ್ಲಿಯೇ ಕೇಳಬಹುದು. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ... ತಿಳಿಯಲು ಕೆಳಗಿನ ಯುಟೂಬ್ ಲಿಂಕನ್ನು ಕ್ಲಿಕ್ಕಿಸಿ
https://youtu.be/PMGKrZ-l0EY

ಜೂನ್ 06, 2014

ಚಿಪ್ಪೊಡೆದ ಮುತ್ತು

ಬೇಸಿಗೆಯ ಬಿಸಿಲು ಬಿಸಿಯುಸಿರನ್ನು ಕಾರುತ್ತ ಎಲ್ಲರ ಮೈಯಿಂದ ನೀರಾಗಿ ಇಳಿಯುತ್ತಿತ್ತು. ಆಗಾಗ ನದಿ ದಂಡೆಗೆ ಹೋಗುತ್ತಿದ್ದ ನನಗೆ ಇದಾವುದರ ಪರಿವೆಯೂ ಇರಲಿಲ್ಲ. ಸಂಜೆಗೆಂಪು ಬಿಸಿಲಿನಲ್ಲಿ ಹೊಳೆಯುವ ಕಣ್ಣುಗಳುಳ್ಳ ಆ ದುಂಡು ಮುಖವು ಥಟ್ಟನೆ ಕಣ್ಣಿಗೆ ಬೀಳುವಲ್ಲಿ ವಂಚಿಸುತ್ತಿರಲಿಲ್ಲ. ಚಿಪ್ಪುಗಳನ್ನು ಆರಿಸುತ್ತ ಹಿಡಿಕೆಯಲ್ಲಿ ತುಂಬಿಕೊಂಡು ತನ್ನ ಬಣ್ಣದ ಚಿಟ್ಟೆಯ ಲಂಗದೊಳಗೆ ತುಂಬಿ ಮತ್ತೆ ಆರಿಸುವುದರಲ್ಲಿಯೇ ತಲ್ಲೀನಳಾಗಿರುತ್ತಿದ್ದಳು. ಹೊತ್ತು ಮುಳುಗುವ ಮುಂಚಿನ ತನಕ ಎಷ್ಟು ಆರಿಸಿದರೂ ದಣಿವಿಲ್ಲವೆಂಬಂತೆ ಅವಳಲ್ಲಿ ಹುರುಪು ಹೆಪ್ಪುಗಟ್ಟಿರುವುದು ತೋರುತ್ತಿತ್ತು. ನೂರಾರು ಕನಸುಗಳಡಗಿರುವ ಆ ಕಣ್ಣುಗಳಲ್ಲಿ ಒಪ್ಪವಾದ ಚಿಪ್ಪುಗಳಲ್ಲಿ ಮತ್ತೆನನ್ನೋ ಹುಡುಕಾಡುತ್ತಿರುವುದು ನಾನು ಕಾಣುತ್ತಿದ್ದೆ.

ಸುತ್ತಲಿನವರೆಲ್ಲ ಅವರವರ ಘನತೆಗೆ ತಕ್ಕಂತೆ ಓಡಾಡಿಕೊಂಡೋ, ಮರಳಿನಲ್ಲಿ ಉರುಳಾಡಿಕೊಂಡೋ, ಹರಟೆಯಲ್ಲಿ ತೇಲಾಡಿಕೊಂಡೋ ಅಡ್ಡಾಡುತ್ತಿದ್ದರು. ಅವರು 'ಈ ದೇಹವೇನು, ಮೂಳೆ ಮಾಂಸಗಳ ತಡಿಕೆ ಮಾತ್ರ' ಎಂಬುದನ್ನು ತಾವಷ್ಟೆ ತಿಳಿದಿರುವಂತೆ ಕಂಡುಬರುತ್ತಿದ್ದರು. ಇದು ಮೆಗಾ ಧಾರಾವಾಹಿಯಂತೆ ದಿನಾ ನನಗೆ ಇದ್ದದ್ದೆ. ಆದರೂ ಈ ದೃಶ್ಯಗಳನ್ನು ನೋಡಲು ಜೊಲ್ಲು ಸುರಿಸಿಕೊಂಡು ಬರುವವರೇ ಅಲ್ಲಿ ಬಹಳ ಜನರಾಗಿದ್ದರು.

ನಾನು ಸುತ್ತಾಡಿ ತಿರುಗಿ ಬರುವವರೆಗೆ ಅವಳು ಚಿಪ್ಪುಗಳನ್ನೆಲ್ಲ ಗುಡ್ಡೆಯೊಟ್ಟಿ ಒಂದೊಂದೇ ಕೈಗೆತ್ತಿಕೊಂಡು ಎರಡು ಭಾಗ ಮಾಡಿ ಅದರೊಳಗೇನನ್ನೋ ಕಾತರದಿಂದ ಕಣ್ಣರಳಿಸಿ ನೋಡುತ್ತಿರುತಿದ್ದಳು. ಅದೂ ಖಾಲಿಯೇ'ಎಂದು ತಿಳಿದರೂ ನಿರಾಶಳಾಗದೆ ಮತ್ತೆ ಇನ್ನೊಂದನ್ನು ಕೈಗೆತ್ತಿಕೊಳ್ಳುತ್ತಿದ್ದಳು. ಎಲ್ಲವನ್ನೂ ನೋಡಿಯಾದ ಮೇಲೆ ಏನೂ ಸಿಗದೆ ನಿರಾಸೆಯಾದರೂ ಬೇಸರ ಮಾಡಿಕೊಳ್ಳದೆ ಹಿಂದಿರುಗಿ ಹೊರಟು ಹೋಗುತ್ತಿದ್ದಳು.

ಅಂದು ಅವಳು ಹೋದ ಮೇಲೂ ನನಗೇಕೋ ಇನ್ನು ರೂಮಿನಿಡೆಗೆ ಕಾಲು ನೂಕಲು ಮನಸ್ಸಾಗಲಿಲ್ಲ. ಇದ್ಯಾವುದನ್ನೂ ನೋಡದೆ ಸೂರ್ಯ ಪಶ್ಚಿಮದಲ್ಲಿ ಗುಡ್ಡಗಳ ಒಡಲೊಳಗೆ ಅಡಗಿಕೊಳ್ಳಲು ತಡಕಾಡುತ್ತಿದ್ದ. ಹಕ್ಕಿಗಳು ಗೂಡು ಸೇರಿಕೊಳ್ಳಲು ಅವನೊಂದಿಗೆ ಸ್ಪರ್ಧೆಗಿಳಿದಿರುವಂತೆ ವೇಗದೋಟದ ರೆಕ್ಕೆ ಬಡಿತದಿಂದ ಭಾಸವಾಗುತ್ತಿತ್ತು. ಸುತ್ತಲಿನ ಜನರೂ ಕತ್ತಲಾಗುವ ಮೊದಲೇ ಜಾಗ ಖಾಲಿ ಮಾಡತೊಡಗಿದ್ದರು. ಗಗನವೆಲ್ಲ ಕೆಂಪು ಕೆಂಪಾಗಿತ್ತು. ಜಲಧಿಯ ಅಲೆಗಳು ತಕಧಿಮಿತ ಮಾಡುತಿದ್ದವು. ದೂರದ ಮಾರುತಗಳಿಂದ ಮಂದಾನಿಲವು ಜಾರಿಕೊಂಡು ತಣ್ಣಗೆ ಮೈ ಚುಚ್ಚುತ್ತ ಚುಮುಚುಮು ಚಳಿಯನ್ನು ಚಿಮ್ಮಿಸುತ್ತಿತ್ತು. ಆ ತಂಪುಗಾಳಿ ಬಡಿದಾಗೊಮ್ಮೆ ಶರೀರ ಪೂರ್ತಿ ಕೆಂಪು ಚುಕ್ಕೆಮಯವಾಗಿ ಮೈ ಜುಮ್ಮೆನ್ನುವಂತಾಗಿತ್ತು. ಕೈಕಟ್ಟಿ ಬೆಂಚಿನ ಮೇಲೆ ಕಾಲೆಳೆದುಕೊಂಡು ಕುಳಿತುಕೊಂಡೆ. ನೆನಪಿನಲೆಗಳು ಸಾಲಿನಂತೆ ಬಂದು ಸ್ಮೃತಿಪಟಲಕ್ಕೆ ಅಪ್ಪಳಿಸತೊಡಗಿದವು. ನೆನೆದು ಒದ್ದೆಯಾದ ಹೊದಿಕೆಯಿಂದ ಒಂದೊಂದೇ ಹನಿಗಳು ತೊಟ್ಟಿಕ್ಕತೊಡಗಿದವು. ಸುತ್ತಲೆಲ್ಲ ಅದರ ಸಿಂಚನ ಹಾರಿಕೊಂಡಿತ್ತು.

***

ಕಾಲೇಜೋದಿಗೆಂದು ಹಳ್ಳಿಯ ತಿಳಿ ಹೊದಿಕೆಯಿಂದ ಎದ್ದುಬಂದ ನಾನು ಇಲ್ಲಿನ ವರ್ಣಮಯ ಬದುಕಿಗೆ ಬೆರಗಾಗಿದ್ದೆ. ಅಪ್ಪ-ಅಮ್ಮ ಕಳಿಸಿಕೊಡುತ್ತಿದ್ದ ದುಡ್ಡಿನಲ್ಲಿ ಉಡುಗೆ ತೊಡುಗೆ ಬೆಡಗಿಗೇನೂ ಕಮ್ಮಿ ಮಾಡಿಕೊಂಡಿರಲಿಲ್ಲ. ಹುಟ್ಟಿದ ಅಷ್ಟೂ ಮಕ್ಕಳನ್ನು ಸಾಕುವುದರಲ್ಲಿ ಅವರೂ ಎಂದು ಸೋತಿರಲಿಲ್ಲ. ನಮ್ಮ ಮೇಲೆ ಎಲ್ಲಾ ತಾಯಿ-ತಂದೆಯರಿಗಿಂತ ಹೆಚ್ಚಿನ ಆಶಾಗೋಪುರವನ್ನು ಕಟ್ಟಿಟ್ಟುಕೊಂಡು ಕುಳಿತಿದ್ದರು. ಒಬ್ಬ ತಮ್ಮ ಓದು ಬಿಟ್ಟು ಊರಿನ ಪೋಕರಿಗಳ ಗುಂಪು ಸೇರಿಕೊಂಡು ತಾನು ಮಾಡದೆ ಇರುವುದು ಯಾವುದೂ ಉಳಿದಿರಲಿಲ್ಲ. ಇನ್ನು ಉಳಿದವರು ಬದುಕಿನ ಬಗ್ಗೆ ಚಿಂತೆ ಮಾಡುವಷ್ಟು ಬೆಳೆದಿರಲಿಲ್ಲ. ತಂಗಿಯಂತೂ ಅಪ್ಪ-ಅಮ್ಮರ ಜೊತೆ ಕೈಕೂಡಿಸಿಕೊಂಡಿದ್ದಳು. ಹೀಗಾಗಿ ನನ್ನ ಮೇಲೆಯೇ ಅವರ ಬೆಟ್ಟದಾಸೆ ಬೆಳೆದಿತ್ತು.

ಬಣ್ಣದ ಲೋಕದಲ್ಲಿ ಬೆಣ್ಣೆ ಸವಿಯುವ ಕನಸುಗಳನ್ನು ಕಾಣುತ್ತಿದ್ದವನಿಗೆ ಓದು-ಬರಹ ಮಾಡಬೇಕಾದರೆ ಸಮರವೇ ನಡೆಯುತ್ತಿತ್ತು. ಕಾಲೇಜಿನ ಕ್ಲಾಸಿನಲ್ಲೆಲ್ಲ ಶಕುಂತಲೆಯರ ಶೃಂಗಾರ ವರ್ಣನೆಯ ಉಪನ್ಯಾಸಗಳೇ ಉಲಿಯುತ್ತಿದ್ದವು. ರೂಮುಗಳನ್ನು ಸೇರಿಕೊಂಡರೆ ಹರಟೆ ಕೊಚ್ಚುವುದರಲ್ಲೇ ಮಗ್ನ. ಮಧ್ಯರಾತ್ರಿ ಕಳೆದು ಎಚ್ಚರಿಸಿದಾಗಲೂ ಬೆಚ್ಚಿಬೀಳುತ್ತಿರಲಿಲ್ಲ. ಟೂರು, ಪಿಕ್ನಿಕ್ಕುಗಳೆಂದರೆ ಸಾಕಾಗಿತ್ತು. ಎಲ್ಲರೂ ಪುಳಕಿತರಾಗಿ ಬಿಡುತ್ತಿದ್ದೆವು. ಪ್ರೀತಿ-ಪ್ರೇಮದ ಹುಸಿಮೋಹಕ್ಕೆ ಒಳಗಾಗಿ ಹೂಮಾಲೆಯಂತೆ ಇಷ್ಟೇ ದಿವಸ ಕೊರಳಲ್ಲಿಟ್ಟುಕೊಂಡು ಮರುದಿವಸ ಮತ್ತೊಂದು ಹೂಮಾಲೆಗಾಗಿ ಕೊರಳು ಒಡ್ಡಲು ರೆಡಿಯಾಗಿರುತಿದ್ದವು. ಲಂಗು ಲಗಾಮಿಲ್ಲದ ಹರೆಯದ ಪೊಗರು ಬೆರಗಾಗುವಷ್ಟು ! ಆದರೆ ಚಿಗುರಬೇಕಾದ ಭವಿಷ್ಯಕ್ಕೆ ಪೊಳ್ಳು ಬುನಾದಿ ಕಟ್ಟುತ್ತಿರುವೆವು ಎಂಬ ಅರಿವು ಇರಲಿಲ್ಲ.

ಓದು ಮುಗಿಯುತ್ತಾ ಬಂತು, ಮುಂದೇನು? ಎಂಬ ಬಗ್ಗೆ ಕೊಂಚವಾದರೂ ಹಂಚಿಕೆ ಹಾಕುವ ಹವಣಿಕೆ ನಡೆಸಲಿಲ್ಲ. ಮುಂದಡಿಯಿಡುವ ಎಡೆಗೆ ದೃಷ್ಟಿ ಚುರುಕುಗೊಳಿಸದೆ, ಇರುವಿಕೆಯ ಹುಸಿ ಹಸಿರಿನಲ್ಲಿಯೇ ತೆವಳುವುದು ಬಲು ಮೋಜೆನಿಸುತ್ತಿತ್ತು. ವೇಗದ ಬದುಕಿನಲ್ಲಿ ದಾಂಗುಡಿಯಾಗಿ ಹೋಗುತ್ತಿರುವವರ ಜೊತೆ ಮೇಲೆದ್ದು ಬರುವ ಆವೇಶ ಹೆಚ್ಚಬೇಕಾದುದು ದೂರವೇ ಉಳಿದು, ಉದ್ಭವಿಸಲೇ ಇಲ್ಲ.

ಥಟ್ಟನೆ ಎಚ್ಚರವಾಯಿತು. ತೊಟ್ಟಿಕ್ಕುತ್ತಿದ್ದ ನೆನಪಿನ ಹೊದಿಕೆ ಒಣಗಿಯಾಗಿತ್ತು. ಸುತ್ತಲೂ ನೋಡಿದೆ, ಕಪ್ಪು ಕತ್ತಲು ಕಣ್ಣಿಗೆ ಮರೆಮಾಚುತ್ತಿದೆ. ಮೇಲೆದ್ದು ರೂಮಿಗೆ ಬಂದಾಗ ಊರಿನಿಂದ ಕಾಗದ ಬಂದಿತ್ತು- 'ಅಪ್ಪನಿಗೆ ಹುಷಾರಿಲ್ಲ...ಬಹಳ ಸಿರಿಯಸ್ಸು ....ಅಮ್ಮ ಗಾಬರಿಗೊಂಡಿದ್ದಾಳೆ. ಬೇಗನೆ ಊರಿಗೆ ಬಂದುಬಿಡು'. ಬರೆದಿರುವ ಸಾಲು ಓದಿ, 'ಅದಕ್ಕೇ ಈ ತಿಂಗಳು ದುಡ್ಡು ಕಳಿಸಲಿಲ್ಲ ನೀವು' ಎಂದು ಬೇಸರವಾಯಿತು. 'ನನಗೀಗ ಊರಿಗೆ ಬರಲು ಸಮಯವಿಲ್ಲ. ಅಪ್ಪನಿಗೆ ಎಲ್ಲಾದರೂ ತೋರಿಸಿ'- ಒಂದೇ ಸಾಲಲ್ಲಿ ಆಗಲೇ ಬರೆದಿಟ್ಟು ಮರುದಿನ ಪೋಸ್ಟ್‌ಬಾಕ್ಸ್‌ನಲ್ಲಿ ತಳ್ಳಿ ಬಂದೆ.

ಅಂದೇಕೋ ಮೈ ತಣ್ಣೀರಿನಲ್ಲಿ ನೆನೆದಂತಾಗಿ ಹಾಸಿಗೆಯಿಂದ ಬಿಡಿಸಿಕೊಳ್ಳಲು ಬಯಸಲಿಲ್ಲ. ಅವತ್ತು ರವಿವಾರವೂ ಆಗಿದ್ದರಿಂದ ಅನಿವಾರ್ಯವಾಗಿ ಮನಸ್ಸು ಮತ್ತಷು ಹಟಮಾರಿಯಾಗಿತ್ತು. ಮಧ್ಯಾಹ್ನ ಮಾಗುವವರೆಗೆ ಮಲಗಿ, ಎದ್ದು ಸ್ನಾನ,ಊಟೋಪಚಾರಗಳನ್ನು ಮುಗಿಸಿಕೊಂಡು ಸಾಯಂಕಾಲದ ಹೊತ್ತಿಗೆ ನದಿ ದಂಡೆಯ ಕಡೆಗೆ ಹೊರಟುಬಿಟ್ಟೆ.

ಎಂದಿನಂತೆ ಜನರು ಜಲದಾಣದ ಅಡಿಯ ಬದಿಯಲೆಲ್ಲ ಓಡಾಡುವುದರಲ್ಲಿ ತೊಡಗಿದ್ದರು. ಅದರ ನಡುವೆ ಚಿಪ್ಪಾರಿಸುವ ಚಿಟ್ಟೆಗೆ ಪತ್ತೆ ಹಚ್ಚಲು ಬೆಟ್ಟ ಹತ್ತಬೇಕಾಗಲಿಲ್ಲ. ಅವಳು ಚಿಪ್ಪಾರಿಸುವುದರಲ್ಲಿಯೇ ತನ್ನ ಚಿತ್ತವನ್ನು ಮುಚ್ಚಿಟ್ಟುಕೊಂಡಿದ್ದಳು.

ದಿನಕರನ ಕೆಂಗಿರಣದಿಂದ ಸುತ್ತಲೆಲ್ಲ ಸಿಡಿದಿದ್ದ ಕೆಂಪು ರಂಗು ಮಂಕಾಗತೊಡಗಿತ್ತು. ಪಡುವಣದ ಮುಗಿಲ ಮೇಲೆ ಅಸ್ಪಷ್ಟ ಕೆಂಪು ಗೆರೆಗಳು ನಿತ್ರಾಣದ ಸ್ಥಿತಿಯನ್ನು ತಲುಪುತಿದ್ದಂತೆ, ಸಂಜೆಗತ್ತಲು ಒತ್ತೊತ್ತಾಗಿ ಸೇರಿಕೊಳ್ಳಲು ಬಡಿದಾಟ ನಡೆಸಿತ್ತು. ಆ ಕಪ್ಪು ಕತ್ತಲಿನ ನಡುವಿನಿಂದ ಬಿಳಿಮಿಶ್ರಿತ ಕಪ್ಪು ಕೂದಲಿನ ಮುಖವಾಡ ಧರಿಸಿರುವನೋ ಎಂಬಂಥ ಮುಖದವನು ಬಂದು 'ಅಣ್ಣಾ... ಈ ಮೂಟೆಗೆ ಸ್ವಲ್ಪ ಕೈ ಹಚ್ಚು. ಎಂಟು ದಿವಸ ಬಂದಿರಲಿಲ್ಲ, ಬಹಳ ಜಮಾಯಿಸಿದ್ವು. ಎಲ್ಲ ತುಂಬಿ ಕೊಂಡಿದ್ದೀನಿ... ಬಹಳ ಭಾರವಾಗಿ ಬಿಟ್ಟಿದೆ. ಎತ್ತಿಕೊಳ್ಳಲು ಆಗ್ತಾ ಇಲ್ಲ' ಎಂದ. ಅವನು ಕೈ ಮಾಡಿದ ಕಡೆ ಎದ್ದು ನಿಂತು ಕಣ್ಣಿನ ದೃಷ್ಟಿ ಬಲವಾಗಿ ನೂಕಿದೆ. ಚಿಪ್ಪುಗಳ ಗುಡ್ಡೆ ಚೀಲದೊಳಗೆ ಅಡಗಿಕೊಂಡಿರುವುದು ಮನವರಿಕೆಯಾಗಲು ತಡವಾಗಲಿಲ್ಲ. ಬಹುಶಃ ಚಿಪ್ಪಾಯ್ದವಳು ಇವನ ಮಗಳೇ ಆಗಿರಬೇಕು ಎಂದುಕೊಂಡು 'ಸರಿ ಬಾ, ಎತ್ತುತ್ತೀನಿ' ಅಂತ ಹೋದೆ. ಅವನು ಟವೆಲ್ ಸುತ್ತಿ ತಲೆ ಮೆಲಿಟ್ಟುಕೊಂಡ. 'ಚಿಪ್ಪಾಯ್ದವಳು ನಿಮಗೇನಾಗಬೇಕು ?'- ಮೂಟೆ ಎತ್ತುತ್ತ ಧೈರ್ಯ ತಂದುಕೊಂಡು ಕೇಳಿದೆ. 'ಅವಳ್ಯಾರೋ ಕೋಗಿಲೆ! ದಿಕ್ಕಿಲ್ಲದವಳು, ದಿನಾ ಬಂದು ಚಿಪ್ಪಾರಿಸಿಟ್ಟು ಹೋಗ್ತಾಳೆ. 2-3 ದಿವಸಕ್ಕೊಂದ್ಸಲ ನಾನು ಬಂದು ತುಂಬಿಕೊಂಡು ಹೋಗಿ ಮಾರಿ ಬರ‌್ತೀನಿ. ನಾನು, ನನ್ನ ಹೆಂಡ್ತಿ ಮಕ್ಳು ಒಂದುಹೊತ್ತಿನ ಊಟ ಅವಳ ಹೆಸರಿನಲ್ಲೇ ಮಾಡ್ತೀವಿ' ಎನ್ನುತ್ತ ದಾಪುಗಾಲು ಹಾಕಿ ನಡೆದನು.

ಅವನ ಮಾತು ಕೇಳಿ ನನ್ನ ಮನಸ್ಸು ಯಾಕೋ ಮರಗುವಂತಾಯ್ತು. ಆದರೆ ಅವಳು ಯಾರು? ಎಲ್ಲಿಯವಳು? ಚಿಪ್ಪುಗಳನ್ನೇಕೆ ಆರಿಸುತ್ತಾಳೆ? ಅದರಲ್ಲೆನು ಅರಸುತ್ತಾಳೆ? ಇನ್ನಷ್ಟು ಕುತೂಹಲ ಹೆಚ್ಚಾಗಿ ಅವಳನ್ನು ಕೇಳಿಯೇ ಬಿಡಬೇಕೆಂದು ಆತುರ ಏಣಿ ಏರತೊಡಗಿತು. ನಾಳೆ ಕೇಳಿದರಾಯಿತು ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡು ರೂಮಿನ ಕಡೆ ಕಾಲಿಗೆ ಜೀವ ಕೊಟ್ಟೆ.

***

ಅಂದು ಗೆಳೆಯರ ಗುಂಪು ನನ್ನ ರೂಮಿಗೆ ದೌಡಾಯಿಸಿತು. ಎಲ್ಲರೂ ಕೂಡಿಯೇ ಅವತ್ತು ನದಿ ದಂಡೆಗೆ ಹೋಟೆಲ್‌ನಿಂದ ತಿಂಡಿ ಕಟ್ಟಿಕೊಂಡು ಹೋಗುವ ನಿರ್ಧಾರವಾಯಿತು. ಸಂಜೆ ಐದು ಗಂಟೆ ಸುಮಾರಿಗೆ ಅಲ್ಲಿ ಬಂದು ಸೇರಿಕೊಂಡೆವು. ಊಟಕ್ಕೆ ಉಪ್ಪಿನಕಾಯಿ ಮರೆತು ತರಲಿಲ್ಲವೆಂದು ಬೇಸರ ಮಾಡಿಕೊಳ್ಳದೆ ಸುತ್ತಲಿನ ಸವಿಯನ್ನು ಚಪ್ಪರಿಸುತ್ತ ಊಟ ಗಂಟಲಿಗಿಳಿಸಿಕೊಂಡೆವು.

ಸಂಜೆ ಆರರ ಸಮಯವನ್ನು ಸಮೀಪಿಸುತ್ತಿತ್ತು. ನದಿಯ ದೂರ ತೀರದ ಬೆಟ್ಟದ ಮುಡಿಯ ಮೇಲೆ ಕೆಂಪು ಚಕ್ರದಂತೆ ಸುಳಿ ಮಿಂಚು ಬೀರುತ್ತಿರವ ಸೂರ್ಯ ಇಂಚಿಂಚಾಗಿ ಮುಚ್ಚಿಕೊಳ್ಳಲೆತ್ನಿಸುತ್ತಿದ್ದನು. ಇಲ್ಲಿ ಚಿಪ್ಪಾರಿಸುತ್ತಿದ್ದ ಹುಡುಗಿ ಇನ್ನೂ ಚಿಪ್ಪುಗಳನ್ನರಸುತ್ತ ನೀರಿಗಿಳಿದಿದ್ದಳು. ಬಹುಶಃ ಇವಳು ಒಳಬರುವುದನ್ನೇ ಕಾದು ಕುಳಿತಂತಿದ್ದ ಭಯಂಕರ ಅಲೆಯೊಂದು ಬಂದು ದಡಕ್ಕೆ ಬಡಿದು ಹಿಂದಿರುಗುವಾಗ ಅವಳನ್ನೂ ಒಳಗೆಳೆದುಕೊಂಡು ಹೊರಟಿತು. ಸುತ್ತಲಿನವರೆಲ್ಲ ಕಣ್ಣಗಲಿಸಿ ತುಟಿಗಳ ಮೆಲೆ ನಾಲ್ಕು ಬೆರಳುಗಳನ್ನಿಟ್ಟುಕೊಂಡು ನೋಡುತ್ತಿದ್ದರೇ ವಿನಾ ಮುಷ್ಟಿ ಬಿಗಿದು ಯಾರೂ ಮುಂದೆ ಬರುವ ಧೈರ್ಯ ಮಾಡಲಿಲ್ಲ. ಸಾವಿನ ಬಾಯಿಯಲ್ಲಿ ತುತ್ತಾಗಿ ಹಿಂಜಾಡುತ್ತ ಇಷ್ಟಷ್ಟೆ ಅದರ ಹೊಟ್ಟೆಯೊಳಗೆ ಸರಿಯುತ್ತಿದ್ದಳು. ಅವಳ ಪುಟ್ಟ ಬಾಯಿಯಿಂದ ಸಣ್ಣದಾಗಿ 'ಕಾಪಾಡಿ ನನ್ನನ್ನು ಯಾರಾದರೂ, ಕಾಪಾಡಿ' ಎಂಬ ಅರ್ತನಾದ ಸುಳಿಸುಳಿಯಾಗಿ ಎಲ್ಲರ ಕಿವಿಯಲ್ಲಿ ಸುತ್ತಿಬಳಸಿ ಬಡಿಯುತ್ತಿತ್ತು. ಆದರೆ ಅಲ್ಲೇ ನಿಂತಿದ್ದ ನಾನೂ ನನ್ನ ಗೆಳೆಯರೂ ಬೆದರುಗೊಂಬೆಗಳಾಗಿದ್ದೆವು.

ಕ್ಷಣಗಳು ಉರುಳುತ್ತಿದ್ದವು. ಅವಳ ಚೀರಾಟವಿನ್ನೂ ಗುಟುಕು ಹಾಕುತ್ತಿತ್ತು.

ಅಷ್ಟರಲ್ಲೇ ಗೋಣಿ ಚೀಲ ಹಿಡಿದುಕೊಂಡು ಬರುತ್ತಿದ್ದ 'ಆ ಮನುಷ್ಯ' ದಟ್ಟೈಸಿ ನಿಂತ ಜನರ ದೃಷ್ಟಿ ನೆಟ್ಟ ಕಡೆಗೆ ತನ್ನ ನೋಟವ ಹರಿಸಿದ. ಅವಳು ಬಹಳ ಎನ್ನುವಷ್ಟು ದೂರ ಹೋಗಿದ್ದಳು. ಇವನು ಕೈ ಮೀರಿ ಹೋದ ಸ್ಥಿತಿಯನ್ನು ಮೀರಿಸಿ ತರುವೆನೆಂಬ ದೃಢ ಮನಸ್ಸಿನಿಂದ ನೀರಿನೊಳಗೆ ಜಿಗಿದು ಮುನ್ನುಗ್ಗಿ ನಡೆದನು. ಅವಳು ಮುಂದೆ ಮುಂದೆ ನಡೆದೇ ಇದ್ದಳು. ಇವನು ನೀರಿನಲೆಗಳೊಂದಿಗೆ ಸೇರಿಕೊಂಡು ಹಿಂದೆ ವೇಗದಲ್ಲಿ ಸಾಗಿದನು. ಅವಳನ್ನು ಸಮೀಪಿಸಿ ಹಿಡಿದು ಬೆನ್ನ ಮೆಲೆ ಹಾಕಿಕೊಂಡು ಇನ್ನೇನು ಹಿಂದಿರುಗಬೇಕು ಅಂತ ಪ್ರಯತ್ನಿಸಿದ. ಆದರೆ ಆಗಲಿಲ್ಲ. ಅಲೆಗಳಲ್ಲಿ ತರಗೆಲೆಯಾಗಿದ್ದ. ತಾನಾದರೂ ಉಳಿಯಬೇಕೆಂದು ಅವನ ಜೀವ ಪರಿತಪಿಸಲಿಲ್ಲ. ಇಬ್ಬರೂ ಕೂಡಿಯೇ ಹೊರಟರು. ಒಳಗೆ ಇನ್ನೂ ಒಳಗೆ, ಹಿಂದಿರುಗಿ ಬಾರದ ಆಳಕ್ಕೆ.

ಅವನ ಋಣ ತೀರಿತು. ಅವಳು ಹಚ್ಚಿದ ಕನಸಿನ ದೀಪ ನಂದಿತು. ಪಡುವಣದಲ್ಲಿ ಸೂರ್ಯ ಪೂರ್ಣವಾಗಿ ಆಸ್ತಂಗತನಾದ.

ಎಲ್ಲರೂ ಭಯಭೀತರಾಗಿ ಕಳಾಹೀನ ಮುಖ ಹೊತ್ತು ಮನೆ ಕಡೆಗೆ ಭಾರವಾದ ಹೆಜ್ಜೆಗಳನ್ನು ಎತ್ತಿಡತೊಡಗಿದ್ದರು. ಎಲ್ಲರಂತೆ ನನಗೂ ಬಹಳ ಕಸಿವಿಸಿಯಾಗುತ್ತಿತ್ತು. ಕಾಲೇಜು ಚೆಲುವೆಯರೆದುರು ತೋರಿಸುತ್ತಿದ್ದ ಪೊಗರು ಇಂದೇಕೆ ಇವಳಿಗಾಗಿ ಬಿಸಿರಕ್ತ ಕುದಿಯಲಿಲ್ಲ ಅಂತ ಕೈ ಹಿಸುಕಿಕೊಳ್ಳುತ್ತಿದ್ದೆ.

ಅಂದು ರಾತ್ರಿ ಗೆಳೆಯರ ರೂಮಿನಲ್ಲಿಯೇ ಉಳಿದುಕೊಂಡೆ. ಮನಸಿಗೆ ಯಾವುದೂ ನಿರಾಳ ಅನಿಸುತಿರಲಿಲ್ಲ. ರಾತ್ರಿಯೆಲ್ಲ ಆ ಕರಾಳ ದೃಶ್ಯವೇ ಕಣ್ಣೆದುರು ಬರುತ್ತಿತ್ತು.

ಹೀಗೆಯೇ ಐದು ದಿವಸಗಳು ಐದು ವರ್ಷಗಳಂತೆ ಕಳೆದಿದ್ದವು.

***

ಸಮಯ ಸಾಯಂಕಾಲದ ನಾಲ್ಕನ್ನು ಮುಟ್ಟಿ ಮುಂದೋಡುತ್ತಿದ್ದರೂ ಬಿಸಿಲು ತನ್ನ ತೇಜ ಕಿರಣಗಳೆಸೆತವನ್ನಿಷ್ಟೂ ಕಡಿಮೆ ಮಾಡಿರಲಿಲ್ಲ. ನುಣ್ಣನೆಯ ಟಾರು ರಸ್ತೆ ಮೇಲೆ ನಡೆದು ಬರುತಿದ್ದರೆ ಮುಂದೆಲ್ಲ ಹಸಿಹಸಿಯಾಗಿ ಕಂಡು ಮುಖಕ್ಕೆ ಮಿಂಚು ಹೊಡೆಯುತ್ತಿತ್ತು. ನನ್ನ ದೇಹವೂ ಇದಕ್ಕೆ ಹೊರತಾಗಿರಲಿಲ್ಲ. ಬಾಯಾರಿಕೆಯಿಂದ ನಾಲಿಗೆ ತುಟಿಗಳ ಮಧ್ಯೆ ಒದ್ದಾಡುತಿದ್ದರೆ, ಬೆವರು ಏಕಾಂಗಿ ಹೊರಾಟ ನಡೆಸಿತ್ತು. ಆ ಬಿರುಬಿಸಿಲಿನಲ್ಲಿ ಏದುಸಿರು ಬಿಡುತ್ತ ಬಿರಬಿರನೆ ನಡೆದುಕೊಂಡು ಮನೆ ಸೇರಿಕೊಂಡಾಗ ದೇಹ ಸುಸ್ಥಿತಿಗೆ ಬಂದಿದ್ದರೂ ಮನಸ್ಸಿನ್ನೂ ಒದ್ದಾಡುತ್ತಲೇ ಇತ್ತು. ಹಾಸಿಗೆ ಬೀಸಿ ಮೇಲೆ ಹೊರಳಾಡಿ ಮೈ ಮುರಿದುಕೊಂಡು ನಿದ್ದೆಗಾಗಿ ಕಾದರೂ, ಹಾದು ಹೋಗುವ ಹುಸಿ ಸನ್ನೆಯೂ ನನ್ನ ಮನಸ್ಸಿನ ವಿಚಲತೆಯ ಹೊಯ್ದಾಟವನ್ನರಿತ ಅದು ಮಾಡಲಿಲ್ಲ.

ಕಣ್ಣಿನಲ್ಲಿ ಬಿದ್ದಿರುವ ಹರಳು ಪದೇಪದೇ ಕಣ್ಣನ್ನು ತಿವಿದು ನೋವು ತರುವಂತೆ ಅವಳ ನೆನಪು ನನ್ನನ್ನು ಪದೇಪದೇ ಬಂದು ಕಾಡುತ್ತಿತ್ತು. ಹಗಲು ಹೊತ್ತುದೂಡಲು ತಿರುಗಾಟದ ಕೆಲಸ ಇದ್ದರೂ ರಾತ್ರಿ ಕಳೆಯಲು ಸೊಳ್ಳೆಗಳ ಒದರಾಟದ ನಡುವೆ ಅವಳ ಮತ್ತು ಅವನ ನಲಿದಾಟಕ್ಕೆ ಕಣ್ಣು ದಣಿಯುವುದೇ ವಿರಳ. ಅಪ್ಪಿತಪ್ಪಿ ದಣಿದು ಕಣ್ಣು ಮುಚ್ಚಿದರೆ ಕನಸಿನ ಲೋಕದಲ್ಲಿ ಅವರಿಬ್ಬರದೇ ಸರ್ವಾಧಿಕಾರ. ಇದರಿಂದ ಸುಖವಾದ ನಿದ್ದೆ ಎಂದರೇನು ಎಂಬ ಕಲ್ಪನೆಯೂ ನನಗೆ ಮೂಡದಂತಾಗಿತ್ತು.

ಬರುತ್ತ ದಾರಿಯಲ್ಲಿ ಸಿಕ್ಕಿದ ಪೋಸ್ಟ್‌ಮನ್ ಎರಡು ಪತ್ರಗಳನ್ನು ಕೊಟ್ಟಿದ್ದನ್ನು ನೆನಪಿಸಿಕೊಂಡೆ. ಒಂದು, ಊರಿನಿಂದ ಬಂದಿತ್ತು. ಇನ್ನೊಂದು, ಯಾವುದೋ ಸರಕಾರಿ ಆಫೀಸಿನಿಂದ ಕಳಿಸಿರುವಂತೆ ತೋರಿತು. ಕುತೂಹಲದಿಂದ ಮೊದಲು ಅದನ್ನೇ ಒಡೆದು ಕಣ್ಣಾಡಿಸಿದೆ. ಆನಂದಾಶ್ಚರ್ಯಗಳು ಒಡಮೂಡಿ ಬಂದವು. ಧನ್ಯನಾದೆನೆಂದು ಮನದಲೇ ಬೀಗಿದೆ. ಹೆತ್ತವರನ್ನು ನೆನಪಿಸಿಕೊಳ್ಳಬೇಕೆನಿಸಿತು. ಅದು ಸರಕಾರಿ ಆಫೀಸೊಂದರಲ್ಲಿ ಕೆಲಸಕ್ಕೆ ನನ್ನನ್ನು ಸೇರಿಸಿಕೊಳ್ಳಲು ಕರೆಯೋಲೆಯಾಗಿ ಬಂದಿತ್ತು.

ನನಗಾಗಿ ಕಷ್ಟ ಕೋಟಲೆಗಳಲ್ಲಿ ಮುಸುಕಿಕೊಂಡಿದ್ದ ಹೆತ್ತವರಿಗೆ ಇಂದು ಬಿಡುಗಡೆಗೊಳಿಸುವೆ ಅನ್ನೋ ಆನಂದ ಆವರಿಸಿತು. ದುಡಿದು ದಣಿದಿರುವ ತಾಯಿತಂದೆಯರನ್ನು ಅಂಗೈಯಲಿಟ್ಟು ಪೂಜಿಸಬೇಕು ಅನಿಸಿತು. ನನ್ನ ಮೇಲಿರುವ ಅವರ ಋಣದ ಭಾರ ತೀರಿಸಲು ಸಾಧ್ಯವಾಗದಷ್ಟು. ಆದರೆ ಅಣುವಿನಲ್ಲಿ ಒಂದು ಕಣವನ್ನಾದರೂ ತೀರಿಸಲು ನನ್ನನ್ನು ಅಣಿಮಾಡಿಕೊಳ್ಳಬೇಕು ಅನಿಸಿತು. ಸಮುದ್ರದ ನೀರಲ್ಲಿ ಲೀನರಾಗಿ ನನಗೆ ಮಾದರಿಯಾದ ಆ ಇಬ್ಬರು ದೇವತೆಗಳಿಗೂ ಚಿರಋಣಿಯಾಗಬೇಕು. ಬದುಕಿನ ಬಗ್ಗೆ ಚಿಂತಿಸುವಂತೆ ಮಾಡಿದ ಅವರಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಅಣು ಮಾತ್ರವೇ! ಈ ಪತ್ರ ಅಸಹಾಯಕತೆಯಿಂದ ನೊಂದು ಬೆಂದು ಕೊಚ್ಚಿ ಹೋಗುತ್ತಿದ್ದವನ ಮನಸ್ಸಿಗೆ ಇಂಬಾಗಿ ಬಂದಿತ್ತು. ನಾನು ಧನ್ಯನಾದೆ ಅಂದುಕೊಂಡೆ. ಹರುಷಗೊಂಡ ಮನಸ್ಸು ಸೂತ್ರ ಹರಿದ ಗಾಳಿಪಟದಂತೆ ಏನೇನೋ ಆಡಿಕೊಂಡು ಹಾರಾಡಿತು.

ಆ ಪತ್ರವನ್ನು ಕೆಳಗಿಟ್ಟು ಇನ್ನೊಂದು ಪತ್ರದಲ್ಲಿ ಏನಿರಬಹುದು ಅಂತ ಕುತೂಹಲದಿಂದ ಓದಲು ತೊಡಗಿದೆ. ಸಂತೋಷದಿಂದ, ಉಲ್ಲಾಸದಿಂದ ಕುಣಿಯುತ್ತಿರುವಾಗ ಭೂಮಿಯೇ ಬಾಯಿಬಿರಿದು ಒಳಸೆಳೆದುಕೊಂಡಂತೆ, ಈ ಕ್ಷಣವೇ ಹರುಷಗೊಂಡು ಹೃದಯ ತುಂಬಿ ನಲಿಯುತ್ತಿರುವಾಗ ಒಮ್ಮೆಲೆ ದುಃಖದ ಪಾತಾಳಕ್ಕಿಳಿಯುವಂತಾಯಿತು. ಉಲ್ಲಾಸದಲ್ಲಿ ಉಬ್ಬಿ ಹೋಗಿದ್ದ ನಾನು ಬಲೂನಿನ ಗಾಳಿ ಬಿಟ್ಟಂತೆ ಜರ‌್ರನೆ ಇಳಿದು ಕುಸಿದು ಹೋದೆ.

'ಅಪ್ಪ ಜ್ವರದಿಂದ ಹಾಸಿಗೆ ಹಿಡಿದಿದ್ದ. ಇದರಿಂದ ಅಮ್ಮ ನಿಸ್ತೇಜಳಾಗಿದ್ದಳು. ದುಡ್ಡು ಸಿಗದೆ ಡಾಕ್ಟರ್ ಹತ್ತಿರ ಕರೆದೊಯ್ಯಲು ಆಗಲಿಲ್ಲ. ಇಬ್ಬರೂ ನಿನ್ನ ಮುಖ ನೋಡಲು ಎರಡು ದಿವಸ ಕಣ್ಣಲ್ಲೇ ಜೀವ ಹಿಡಿದುಕೊಂಡಿದ್ದರು. ಕೊನೆಗೆ ಅಪ್ಪ ಹಾಸಿಗೆಯಲ್ಲೇ ಚಿರನಿದ್ರೆಗೆ ಜಾರಿದ. ಅಮ್ಮ ಅವನ ಜೊತೆಯಲ್ಲಿಯೇ ಗರತಿಯಾಗಿ ಹೋದಳು...'.

ಈ ಒಂದೊಂದು ಶಬ್ದಗಳನ್ನೂ ಓದುವಾಗ ತುಟಿಗಳು ಅದುರಿ ಹೋಗುತಿದ್ದವು. ದುಃಖ ಉಕ್ಕಿ ಉಕ್ಕಿ ಬಂದು ಸಂತೋಷವನ್ನೆಲ್ಲ ಸವರಿ ನೆಕ್ಕಿ ಬಿಟ್ಟಿತು. ಕುರುಡಾಗಿ ಅರ್ಧ ಬಾಳುವೆ ಸವೆಸಿದವನಿಗೆ ಕ್ಷಣ ಹೊತ್ತು ಕಣ್ಣು ಕೊಟ್ಟು, ಅವನು ಲೋಕದಚ್ಚರಿಗೆ ಬೆರಗಾಗಿ ನಿಂತಿರುವಾಗ ಸೊಬಗು ಪೂರ್ತಿ ಸವಿಯುವ ಮೊದಲೇ ಕಣ್ಣು ಮರಳಿ ಕಿತ್ತುಕೊಂಡಂತಾಗಿತ್ತು ನನ್ನ ಪರಿಸ್ಥಿತಿ.

ಕಣ್ಣ ಮುಂದೆ ಕತ್ತಲಾವರಿಸಲು ಶುರುವಾಯಿತು. ಯಾವ್ಯಾವೋ ಅಸ್ಪಷ್ಟ ಚಿತ್ರಗಳು ಕಣ್ಣೆದುರು ಓಡಾಡತೊಡಗಿದವು. ಏನೇನೋ ಒದರತೊಡಗಿದೆ.

ಆ ನದಿಯ ದಂಡೆಯ ಮೇಲೆ ಚಿಪ್ಪುಗಳನ್ನಾರಿಸುತ್ತಿದ್ದ 'ಓ... ಚಿಟ್ಟೆ, ನೀನು ನೀರಿಗೆ ಬಿದ್ದ ಕ್ಷಣದಲ್ಲೇ ನಾನು ಕಾರ್ಯಪ್ರವೃತ್ತನಾಗಿದ್ದರೆ ನಿನ್ನನ್ನು ಉಳಿಸಬಹುದಿತಲ್ಲ? ಛೀ... ನಿಂತು ನೋಡುತಿದ್ದೆ ನಿನ್ನ ದುರ್ಗತಿಯನ್ನು. ಅವನಾದರೂ ನಿನ್ನನ್ನು ಬದುಕಿಸಬೇಕಾಗಿತ್ತು. ಆದರೆ ಕಾಲ ಮಿಂಚಿದ ಮೇಲೆ ಬಂದನಲ್ಲವೆ. ನೀನು ಹೋದೆ ಅವನೂ ನಿನ್ನ ಜೊತೆಗೆ ಬಂದ... ಅವನನ್ನಾಶ್ರಯಿಸಿದವರ ಬಾಳು ಬರೀ ಗೋಳಲ್ಲವೆ?

ಏನಾಗಿದೆ ನನಗೆ?' ಅಂತ ಎಚ್ಚರವಾಗಲು ಪ್ರಯತ್ನಿಸಿದೆ. ಕೈಗೇನೋ ಸಿಕ್ಕಿತ್ತು. 'ಹ್ಞಾಂ! ಏನಿದು ಪತ್ರದ ಕೆಳಗೆ?' ಎಂದು ನೋಡಿದಾಗ ನನ್ನ ಕುಟುಂಬದ ಫೋಟೋ ಕಂಡಿತು. ಅದರಲ್ಲಿ ಮುದ್ದಾದ ತಂಗಿ ನಗುತ್ತಿದ್ದಳು. ಕೈ ಜಾರಿ ಹೋಗುತ್ತಿರುವ ತಮ್ಮ ಹಿಂದೆ ಹಮ್ಮಿನಿಂದ ನಿಂತ ಹಾಗನ್ನಿಸುತ್ತಿತ್ತು. ಭವಿಷ್ಯದಲ್ಲಿ ಬೆಳಗಬೇಕಾಗಿರುವ ಉಳಿದ ತಮ್ಮಂದಿರು 'ನಿನ್ನ ದಾರೀನೇ ಕಾಯ್ತಾ ಇದ್ದೀವಣ್ಣಾ... ಬೇಗ ಬಂದು ಬಿಡು ನಮ್ಮ ನಡುವೆ. ಬಿಟ್ಟು ಹೋಗಿರುವ ಅಪ್ಪ-ಅಮ್ಮನ ಪ್ರತಿರೂಪವಾಗಿ' ಎಂದು ಕಾತರಿಸುತ್ತಿರುವಂತೆ ಅವರ ಕಣ್ಣುಗಳು ನನ್ನನ್ನು ನೋಡಿ ಹೇಳುತಿದ್ದವು. ಆವಾಗ ಎಚ್ಚರವಾದೆ ಅನ್ನಿಸಿತು. ಕಣ್ಣೀರು ಒರೆಸಿಕೊಂಡೆ. 'ಇಲ್ಲ! ಇವರ ಬಾಳು ಗೋಳಾಗದಿರಲಿ' ಎಂದಿತು ನನ್ನ ಅಂತರಂಗ. ಆ ಕ್ಷಣದಲ್ಲಿ ನನಗೆ, ದೇವರು ಹಾರುವ ಶಕ್ತಿ ಕೊಡಬಾರದೇ ಎಂಬ ಆತುರ ತಾಳಲಾರದಷ್ಟು ಅವತರಿಸಿಬಿಟ್ಟಿತ್ತು.

--------------

ಈ ಕಥೆ ವಿಜಯ ಕರ್ನಾಟಕ ಪತ್ರಿಕೆಯ ’ಸಾಪ್ತಾಹಿಕ ವಿಜಯ’ ದಲ್ಲಿ ದಿನಾಂಕ 21 ಏಪ್ರಿಲ್ 2013 ರಂದು ಪ್ರಕಟಗೊಂಡಿದೆ. ಅಲ್ಲಿಗೆ ಹೋಗಲು ಈ ಲಿಂಕ್ ಕ್ಲಿಕ್ಕಿಸಿ.


ಏಪ್ರಿಲ್ 03, 2011

ಯುಗಾದಿ

ಯುಗಾದಿಯ ಮಂದಾನಿಲ ಬೀಸುತ್ತಿದೆ
ಮರಗಿಡ ಬಳ್ಳಿಗಳಿಂದ
ಹಸಿರು ಚೇತನವಾಗಿ
ಪುಷ್ಪದುಸಿರು ಹೇಳುತ್ತಿದೆ
ಆವಣಿಯ ಆಲಂಗಿಸಿ ಆಗಮಿಸಿದೆ ಯುಗಾದಿ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಇಂಚರದ ಕೊರಳಿಂದ
ಆಹ್ಲಾದದ ಆಹ್ವಾನವಿತ್ತು
ಮಯೂರ ಸಾಂಗತ್ಯದ
ಸಾಂವತ್ಸರ 'ಸಂಗೀತ ಸಂಜೆ' ಸವಿಯುವ...

ಯುಗಾದಿಯ ಮಂದಾನಿಲ ಬೀಸುತ್ತಿದೆ
ಬೇವುಬೆಲ್ಲ ಸಿಹಿಕಹಿ
ಸುಖದುಖಃ ಸಮರಸದಲಿ
ಜೀವನ ಸಾಗುತಲಿರಲಿ
ಯುಗಾಂತ ಯುಗಾಂತರ ಯುಗಾದಿ ಚಕ್ರದಲ್ಲಿ...

ಗುಲ್ಬರ್ಗಾ ಉತ್ಸವ...

ಬಹು ಸಂಸ್ಕೃತಿಯ ಸಂಗಮದಲಿ
ಸಹಬಾಳ್ವೆಯ ಸಮರಸ
ಸರ್ವಧರ್ಮ ಸಮನ್ವಯತೆಯಲಿ
ಸೂರ್ಯನಗರಿಯೇ ವಿಹಂಗಮ....

ಈ ಬಿಸಿಲೂರು ಫಲವತ್ತು...
ಪಡೆಯಿರಿ ಇದರ ಸವಲತ್ತು...

ಕಲ್ಯಾಣಕೆ ತೆರೆದಿಹ ಹೆಬ್ಬಾಗಿಲು
ಕವಿ ಕಲಾವಿದರಿಗೆ ತೂಗಿ ತೊಟ್ಟಿಲು
ಸಂಗೀತ ಸಾಹಿತ್ಯ ಶಿಲ್ಪಕಲೆಯ ಮೆಟ್ಟಿಲು
ಇತಿಹಾಸ ಹೇಳುತ್ತಿವೆ ಕೋಟೆ ಕೊತ್ತಲು...

ಹೂವರಳಿ ನಿಂತ ಜಿಲ್ಲೆಯ...
ಭವ್ಯ ಚರಿತೆ ನೀ ಬಲ್ಲೆಯ...

ಬಾನೆತ್ತರ ಬಿಡಿಸಿಟ್ಟ ಬಣ್ಣದ ಕನಸುಗಳೇ
ನನಸು ಮಾಡಲು ಎಷ್ಟೋ ಮನಸುಗಳಿವೆ
ಗರಿಗೆದರಿದ ನೂರಾಸೆಗಳ ಮುಂದಿದೆ ಉಜ್ವಲ ಭವಿಷ್ಯ
ಮುನ್ನುಗ್ಗು ಶ್ರಮಜೀವಿ ನಿನಗೀ ಉತ್ಸವ...

ಉತ್ಸವ ಉತ್ಸವ ಗುಲ್ಬರ್ಗಾ ಉತ್ಸವ...
ಇದು ’ಅನಂತ ಶಕ್ತಿ’ಯ ಉತ್ಸಾಹ...

ಫೆಬ್ರವರಿ 06, 2011

ಇಳಿದು ಬಾ ಬಾಲೆ

ಹಂಬಲಿಸುತ್ತಿದೆ ಮನ
ಅಂಬರದ ತಾರೆಯನ್ನು
ಸಿಗಬಲ್ಲುದೆ ಹೇಳು ಚಂದಿರ ನನ್ನನು ಬೆಳಗುವುದೆಂದು.
ಅನುರಾಗವೇ ಮೇರುಗಿರಿಯಾಗಿ
ಮುಟ್ಟಬಯಸುವೆ ಚಂಚಲೆ
ಹೋಗದಿರು ಇರುಳುರುಳಿದಂತೆ ಹಗಲಲ್ಲಿ ಆಗಿ ಮಾಯ.
ಸಾಲು ಆಸೆಗಳ ಬಲಿಯಕೊಟ್ಟು
ಬರುವೆ ನಿನ್ನೆಡೆಗೆ ಸೋಲನೊಪ್ಪು
ಗೆಲುವು ನಿನ್ನಡಿಗಿಟ್ಟು ತೊಡಿಸುವೆ ನನ್ನ ಖುಷಿ ಮುಡಿಗೆ.
ಬಾಲೆ ಇಳಿದು ಬಾ ಬಳಿಗೆ
ಪ್ರೇಮದ ಆಲಿಂಗನದೊಳಗೆ
ಬದುಕುಪೂರ್ತಿ ಆವರಿಸಿಬಿಡುವನು ಹುಣ್ಣಿಮೆಯ ಚಂದಿರ ನಮ್ಮೋಳಗೆ.