ಡಿಸೆಂಬರ್ 03, 2020

ಪಂಡಿತ್ ಎಂ.ವೆಂಕಟೇಶ್ ಕುಮಾರ್ ತೊರೆದು ಜೀವಿಸಬಹುದೆ

 


ಕನಕದಾಸರು ಬರೆದ ಅದ್ಭುತ ಕೀರ್ತನೆಗಳಲ್ಲಿ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ” ಕೀರ್ತನೆಯೂ ಒಂದು. ಇದನ್ನು ತಮ್ಮ ಅತ್ಯದ್ಭುತ ಗಾಯನದ ಮೂಲಕ ಜಗತ್ತಿನುದ್ದಗಲಕ್ಕೂ ಪಸರಿಸಿದ ಕೀರ್ತಿ ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರಿಗೆ ಸಲ್ಲುತ್ತದೆ. 

ವೆಂಕಟೇಶ್ ಕುಮಾರ್ ಅವರು ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರು. ಜಾನಪದ ಕಲಾವಿದರಾಗಿದ್ದ ಇವರ ತಂದೆಯೇ ಇವರ ಪ್ರಥಮ ಗುರು. ಇವರ ಗಾಯನದ ಮೇಲೆ ಇವರ ತಂದೆಯ ಶೈಲಿಯ ಛಾಪಿದೆ ಎಂದು ಹೇಳುತ್ತಾರೆ.

ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿದ ಗದಗದ ವಿರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಇವರಿಗೆ ಗ್ವಾಲಿಯರ್ ಘರಾಣೆಯ ಎಲ್ಲ ಹೊಳವುಗಳನ್ನು ತಿಳಿಸಿ, ಅರೆಸಿ ಕುಡಿಸಿದರು. ಗವಾಯಿಗಳ ಆಶೀರ್ವಾದದೊಂದಿಗೆ ಮುಂದೆ ಕನ್ನಡ ನಾಡು ಎಂದೂ ಮರೆಯದ ಗಾಯಕರಾಗಿ ರೂಪುಗೊಳ್ಳುತ್ತಾರೆ.

ಧಾರವಾಡ ನಿವಾಸಿಯಾಗಿರುವ ವೆಂಕಟೇಶ್ ಕುಮಾರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಆಕಾಶವಾಣಿಯ ಏ ಶ್ರೇಣಿಯ ಕಲಾವಿದರಾಗಿ ಸೇವೆ ಸಲ್ಲಿಸಿ ಅಲ್ಲಿಂದ ಅದೇಷ್ಟೋ ಕಿವಿಗಳಿಗೆ ಇಂಪನ್ನು ಹರಿಸಿದ್ದಾರೆ.

ವೆಂಕಟೇಶ್ ಕುಮಾರ್ ಅವರ ಗಾಯನದಲ್ಲಿ ಧಾರವಾಡದ ಮಣ್ಣಿನ ಸೊಗಡು ಮತ್ತು ಕೆಲವು ಸಾರಿ ಪಂಡಿತ್ ರಾಜಗುರುರವರ ಗಾಯನದ ಛಾಪು ಕಾಣುತ್ತವೆ. ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರ ಸಾಲಿನ ಇತ್ತೀಚಿನ ಗಾಯಕರಲ್ಲಿ ಇವರು ಮಂಚೂಣಿಯಲ್ಲಿದಾರೆಂದರೆ ಅತಿಶಯೋಕ್ತಿಯಾಗಲಾರದು. ಇವರು ದೇಶದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೨೦೧೬ರ ಎಪ್ರಿಲ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟೇಶ್ ಕುಮಾರ್ ಅವರು ಕನಕದಾಸರ ಈ ಕೀರ್ತನೆಯನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ಆ ಅಮೋಘ ಗೀತ ಗಾಯನ ಕೇಳಿ ನೀವೂ ಮೈಮರೆಯಿರಿ….


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ