ಅಕ್ಟೋಬರ್ 16, 2020

ಗೋರ್ ಮಾಟಿ

 

ನಿಜಕ್ಕೂ ಖೇದವೆನಿಸುತ್ತಿದೆಹೌದು, ನನ್ನ ಮಾನಸಿಕ ಅವಸ್ಥೆಯನ್ನು ತೋಡಿಕೊಳ್ಳಲಿಕ್ಕೂ ನಮಗೆ ನಮ್ಮದೇ ಆದ ಲಿಪಿ ಇಲ್ಲ. ನಮ್ಮವರ ಬಗ್ಗೆ ಬರೆದುಕೊಳ್ಳಲೂ ನನಗೆ ಬೇರೆ ಲಿಪಿಯ ಮೊರೆ ಹೋಗಬೇಕಾಗಿರುವುದು ನಮ್ಮ ಅಸಹಾಯಕತೆಗೆ ಹಿಡಿದ ಕೈಗನ್ನಡಿ !!

ಇತ್ತೀಚೆಗೆ ಬೀದರ್ ರಂಗ ಮಂದಿರದಲ್ಲಿ ಜರುಗಿದ "ಯುವ ಬಂಜಾರ" ಸಮ್ಮೇಳನದಲ್ಲಿ ಕಳೆದ ಎರಡು ಘಂಟೆಗಳು ನನ್ನನ್ನು ಈಗಲೂ ಕಾಡುತ್ತಿವೆ. ಬಹುಶಃ ಅಷ್ಟೊಂದು ಬಂಜಾರಾ ಭಾಷಿಕರನ್ನು ಹತ್ತಿರದಿಂದ ಕಂಡದ್ದು ಇದೇ ಮೊದಲ ಬಾರಿ. ಯಾಕೆಂದರೇ ಈವತ್ತಿಗೂ ಕೂಡ ನಮ್ಮನ್ನು ಇತಿಹಾಸ ಗುರುತಿಸುವುದು "ಅಲೆಮಾರಿ", "ಕಾಡು ವಾಸಿ"ಗಳೆಂದೆ. ಅಲ್ಲಿಯ ಭಾವತೀವ್ರತೆ ನನ್ನನ್ನು ಯಾವ ಪರಿ ಕಾಡಿದೆಯೆಂದರೇ ನಾನು ಲೇಖನವನ್ನು ಟಂಕಿಸುವಷ್ಟರ ಮಟ್ಟಿಗೆ. ಆಂಗ್ಲ ರಾಜಕಾರಣಿ ಚರ್ಚಿಲ್ ಉಕ್ತಿಗಳು ಯಾಕೋ ಒಮ್ಮೆಲೆ ನೆನಪಾದವು. ಅವನು ಹೇಳಿದಂತೆ those who ignore history are destined to suffer from the mistakes of it.  ಸಾಲುಗಳು ಲಂಬಾಣಿಗರ ವಿಚಾರದಲ್ಲಿ ಇಂದಿಗೂ ಪ್ರಸ್ತುತ. ಲಂಬಾಣಿಗರ ಇತಿಹಾಸವನ್ನು ಓದದ ನಾವುಗಳು ಇತಿಹಾಸದ ಪ್ರಹಾರಕ್ಕೆ ಇಂದಿಗು ನಲುಗುತ್ತಿದ್ದೇವೆ.

ನಿಜ 'ಗೋರ್ ಮಾಟಿ'ಗಳು ತಮ್ಮ ಭವಿತವ್ಯವನ್ನು ಮರೆತು ಬಹಳ ಮುಂದೆ ಸಾಗಿ ಬಂದಿದ್ದೇವೇನೋ ಅನ್ನಿಸುತ್ತಿದೆ. ನಾವು ಮತ್ತೊಮ್ಮೆ ನಮ್ಮ ಗತ ವೈಭವ ಮೆಲುಕು ಹಾಕಲೇಬೇಕಾದ ಸವಾಲು ನಮ್ಮ ಮುಂದೆ ಇದೆ. ಯಾಕಂದ್ರೆ ನಾವು ನೀರಿನಂತೆ. ಯಾವ ಆಕಾರದ ಪಾತ್ರೆಗೆ ನಾವು ಧುಮುಕುತ್ತೇವೋ, ಅದೇ ಸ್ವರೂಪ ಪಡೆದುಕೊಂಡು ಬಂದಿದ್ದೇವೆ. ಯಾವುದೇ ಪ್ರದೇಶಕ್ಕೆ ಸಾಗಿದರೂ ಪ್ರದೇಶದ ಜನರೊಡನೇ ದೂಸರಾ ಮಾತಿಲ್ಲದೇ ಬೆರೆತು ಹೊಗಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಸೇರಿದಂತೆ ಪಾಕಿಸ್ತಾನ, ಅಫಘಾನಿಸ್ತಾನವನ್ನು ಕೂಡಿಸಿ ಭಾರತದ 16 ರಾಜ್ಯಗಳು, ಭೂಪಟದ 60 ರಾಷ್ಟ್ರಗಳಲ್ಲಿ ಹರಿದು 50 ಮಿಲಿಯನ್ ಸಂಖ್ಯೆಯಾಗಿ ಹಂಚಿ ಹೊಗಿದ್ದೇವೆ. ಆದರೂ ಇಂದಿಗೂ ಶಾಶ್ವತ ನೆಲೆ ಮರೀಚಿಕೆಯಾಗಿಯೆ ಉಳಿದಿದೆ. ಅದಕ್ಕಂತಲೇ, ನಮ್ಮಲ್ಲಿ ಬಹಳಷ್ಟು ಜನರು ತಾವು ಲಂಬಾಣಿ ಎನ್ನಲು ಮುಜುಗರ ಪಟ್ಟುಕೊಳ್ಳುತ್ತಾರೆ. ಲಂಬಾಣಿ ಎನ್ನುವ ಕೀಳರಿಮೆ ಅವರನ್ನು ಕಾಡುತ್ತದೆ.


ದೂರದ ಅಫಘಾನಿಸ್ತಾನದಲ್ಲೊಂದು ಪ್ರಾಂತ್ಯವಿದೆ. ಅದರ ಹೆಸರು 'ಗೊರ್' ಅಂತ. ಅಲ್ಲಿನ ಮೂಲನಿವಾಸಿಗಳು ಜೀವನೋಪಾಯಕ್ಕಾಗಿ ಇತರೆಡೆ ತೆರಳಲಾರಂಭಿಸಿದರು. ಸಾಗಾಣಿಕೆ, ವ್ಯಾಪಾರ ವಹಿವಾಟಿನಲ್ಲಿ ನಿಷ್ಣಾತರಾಗಿದ್ದ ಇವರುಗಳು ಬದುಕು ಕಂಡುಕೊಳ್ಳಲು ಜಾಸ್ತಿ ಸಮಯವೇನು ಹಿಡಿಯಲಿಲ್ಲ. ತಮ್ಮ ಪ್ರಾಮಾಣಿಕತೆ, ಕಾರ್ಯತತ್ಪರತೆ, ವ್ಯವಹಾರ ನೈಪುಣ್ಯತೆಗಳಿಂದಾಗಿ ಹೋದಲ್ಲೆಲ್ಲ ಇವರಿಗೆ ತುಂಬು ಹೃದಯದ ಸ್ವಾಗತ ಸಿಕ್ಕಿತು. ಅನ್ಯ ಸಂಸ್ಕೃತಿಯ ಜೊತೆಗೆ ಸುಲಭವಾಗಿ ಮಿಳಿತಗೊಳ್ಳುವ ಸ್ವಭಾವದಿಂದಾಗಿ ಎಲ್ಲರಿಗೂ ಬೇಕಾದವರಾದರು. ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೇ, ಅನ್ಯ ಸಂಸ್ಕೃತಿಯನ್ನು ಗೌರವಿಸುತ್ತಾ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನೆಲೆ ವಿಸ್ತರಿಸಿಕೊಂಡರು.  

ಭಾರತದ ಸಂಪತ್ತಿನಾಸೆಗೆ ದಂಡೆತ್ತಿ ಬಂದ ಮುಸ್ಲಿಂ ದಾಳಿಕೋರರಿಗೆ ರಜಪೂತರಿಗೂ ಮುನ್ನ ವಾಯುವ್ಯ ಭಾರತದ ಸಿಂಧ್ನಲ್ಲಿ ಹಣ್ಣುಗಾಯಿ-ನೀರುಗಾಯಿ ಮಾಡಿದ ಕೀರ್ತಿ ನಮ್ಮ ಪೂರ್ವಜರದು. ಸೆರೆಸಿಕ್ಕ ಘೋರಿ ಎಂಬ ಕಂತ್ರಿಯನ್ನು ಮಾಫ್ ಮಾಡಿದ ಪೃಥ್ವಿರಾಜ್ ಚೌಹಾಣ್ ನಮ್ಮ ಪೂರ್ವಜನೇಅಲ್ಲಿಂದ ಪ್ರಾರಂಭವಾದ ನಮ್ಮ ಪರಾಕ್ರಮ 1857 ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮುಂದುವರಿಯಿತು. ಇತರೆ ಭಾರತಿಯರಂತೆ ಲಂಬಾಣಿಗರು ಹೋರಾಟಕ್ಕೆ ಬೇಕಾದ ಮದ್ದು ಗುಂಡುಗಳನ್ನು ಸಾಗಿಸಿ ಆಂಗ್ಲರ ನಿದ್ದೆ ಕೆಡಿಸಿದ್ದು ದಿಟ.

1947 ಸ್ವಾತಂತ್ರ್ಯ ಹೋರಾಟದ ವರೆಗೂ ಅರಣ್ಯವಾಸಿಗಳಾದ ಲಂಬಾಣಿಗರು ತಾಯಿ ಭಾರತಿಗೆ ತಮ್ಮ ನಿಷ್ಟೆಯನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ.


ದಿ.ನೆಹರೂ ಅವರು ತಮ್ಮLOST CHILDREN OF INDIA ಎಂಬ ಪುಸ್ತಕದಲ್ಲಿ ಲಂಬಾಣಿಗರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಇಂದಿರಾ ಅವರಂತೂ "ಭಾರತ ಅನ್ನುವುದು ಒಂದು ಸೀರೆ ಆದರೇ ಲಂಬಾಣಿಗರು ಸೀರೆಯ ಬಂಗಾರದ ಅಂಚು" ಎಂದು ಹೊಗಳಿದ್ದರು. ಇಷ್ಟಾದರು ಇತಿಹಾಸ ನಮ್ಮನ್ನು 'ಜಿಪ್ಸಿ' 'ಅಲೆಮಾರಿ' ಎನ್ನುವ Tag ದಯಪಾಲಿಸಿದೆ. ಉತ್ತರ ಕರ್ನಾಟಕದ ಹಲವೆಡೆ ಇಂದಿಗೂ ನಮ್ಮನ್ನು 'ಅಡಿ ಲಮಾಣಿ' ಎಂದೆ ಕರೆಯುವುದು. ನಮ್ಮ ಪ್ರಾಮಾಣಿಕತೆ, ಶ್ರಮಿಕತನಕ್ಕೆ ನಮಗೆ ಸಿಕ್ಕ ಉಡುಗೊರೆ ಇದು.

ಸಾಂಬಾ ಬ್ರಾಝಿಲ್ನಲ್ಲಿ ಇಂದಿಗು ಲಂಬಾಣಿಗರದೇ ಪೌರಾಡಳಿತವಿದೆ. ಅಫಘಾನಿಸ್ತಾನದ ಜಿಲ್ಲೆಯೊಂದರ ಹೆಸರು ಇಂದಿಗೂ ತಾಂಡಾ ಅಂತಲೇ ಇದೆ. ಇರಾಕ್ ಯುದ್ದ ಸಂಧಾನಕ್ಕಾಗಿ ಹೋದ ವಿಶ್ವಸಂಸ್ಥೆ ರಾಯಭಾರಿ 'ಮುಖ್ತಾರ್ ಲಮಾಣಿ' ನಮ್ಮವರೆ. ಅದೆಷ್ಟೊ ಶಿಕ್ಷಕರು, ಎಂಜಿನೀಯರುಗಳು, ಶಾಸಕರು, ಮಂತ್ರಿಗಳು, ವೈದ್ಯರು, ಉನ್ನತ ಅಧಿಕಾರಿಗಳು ಇದ್ದರೂ ನಾವಿಂದಿಗೂ ಮುಖ್ಯ ವಾಹಿನಿಗೆ ಬಂದಿಲ್ಲ.  ನಮ್ಮ ಒಳಿತಿಗಾಗಿ ಇರುವ ಮೀಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರ !

ತಾಂಡಾಗಳಲ್ಲಿನ್ನು ರಸ್ತೆ ಸೌಕರ್ಯವಿಲ್ಲ. ಕುಡಿಯುವ ಹನಿ ನೀರಿಗು ತಾತ್ವಾರ. ವಿದ್ಯುತ ಸಂಪರ್ಕಕ್ಕೆ ಕಾದು ಕುಳಿತಿರುವ ಆಸೆ ತುಂಬಿದ ಕಣ್ಣುಗಳು. ಪ್ರಾಥಮಿಕ ವಿಧ್ಯಾಭ್ಯಾಸ ದೂರದ ಮಾತೆ! 5ನೇ ತರಗತಿ ಓದಲೂ ದೂರದ ಊರಿಗೆ ನಡೆದೇ ಹೋಗಬೇಕು. ಉದ್ಯೋಗಕ್ಕಗಿ ಊರೂರು ಅಲೆದಾಡಬೇಕಾದ ಅನಿವಾರ್ಯತೆ.  ಕೊಡುವ ಕೂಲಿಯಲ್ಲೂ ಕಡಿತ. ಬೇಸಿಗೆ ಬಂತೆಂದರೆ ಸಾಮೂಹಿಕವಾಗಿ ಪಟ್ಟಣಕ್ಕೆ ಗುಳೆ ಹೋಗುವುದು ಸಾಮಾನ್ಯ ಸಂಗತಿ. ಮಳೆಗಾಲದಲ್ಲೂ ಮಳೆಯನ್ನೆ ನೆಚ್ಚಿ ಕೃಷಿ ಕಾಯಕ ಮಾಡಬೇಕು.   ನಿರುದ್ಯೋಗ, ಅನಕ್ಷರತೆ, ಸಂಘಟನೆಯ ಕೊರತೆ ನಮ್ಮನ್ನು ಇನ್ನು ಗಟ್ಟಿಯಾಗಿ ಅಪ್ಪಿಕೊಂಡಿವೆ. ಇದು ಇನ್ನೊಂದು ಚಿತ್ರ!!

ಗಾಂಧಿಜಿ ಹೇಳಿದಂತೆ "ಭಾರತದ ಹೃದಯ ಹಳ್ಳಿಯಲ್ಲಿ ನೆಲೆಸಿದೆ". ನನ್ನ ಅಭಿಪ್ರಾಯದಂತೆ ಎಷ್ಟೆ ಉನ್ನತ ಹುದ್ದೆಯಲ್ಲಿದ್ದರೂ ಲಂಬಾಣಿಗನ ಹೃದಯ ತಾಂಡಾಗಳಲ್ಲಿ ನೆಲೆಸಿದೆ. ಸಬಲ, ಶಿಕ್ಷಿತ, ಪ್ರಬಲ ಬೆರಳೆಣಿಕೆಯ ಲಂಬಾಣಿಗರು ತಾಂಡಾಗಳತ್ತ ಮುಖ ಮಾಡಲೇಬೇಕಾಗಿದೆ. ನಮ್ಮಲ್ಲೆ ಕಚ್ಚಾಡುವುದನ್ನು ಬಿಟ್ಟು ನಮ್ಮ ಇತರ ಬಂಧುಗಳ ಬಗ್ಗೆ ಚಿಂತಿಸಬೇಕಾಗಿದೆ. ಕೆಲವೇ ಯಹೂದಿಗಳು ತಮ್ಮ ಅಸ್ತಿತ್ವ ಕಂಡುಕೊಂಡಂತೆ ನಾವುಗಳು ದಿಸೆಯಲ್ಲಿ ಪ್ರಯತ್ನ ಮಾಡಬೇಕಾಗಿದೆ. ತಾಂಡಾದ 'ಸೋಮ್ಲಾ ನಾಯಕ್ಹಾಗೂ ನಗರದ ಸೊಮನಾಥನಿಗೂ ಯಾವುದೇ ಭಿನ್ನತೆ ಇಲ್ಲಒಬ್ಬ ಧೋತಿ ಉಟ್ಟರೆ ಇನ್ನೊಬ್ಬ ಪ್ಯಾಂಟ್ ಉಡುತ್ತಾನೆ. ತಾಂಡಾದ ಸೋನಾ ಬಾಯಿ ಹಾಗು ನಗರದ ಸೋನಿಯಾಗೂ ಯಾವುದೆ ಭಿನ್ನತೆ ಇಲ್ಲ. ಒಬ್ಬಾಕೆ ಜೀನ್ಸ್ ತೊಟ್ಟರೆ, ಇನ್ನೊಬ್ಬಾಕೆ ಫೇಟಿಯಾ ಉಡುತ್ತಾಳೆ.

ನಾವು ಎಲ್ಲಿಯವರೆಗೂ ಆರ್ಥಿಕ ಹಾಗು ಪ್ರಮುಖವಾಗಿ ರಾಜಕೀಯವಾಗಿ ಪ್ರಬಲರಾಗುವುದಿಲ್ಲವೋ ಅಲ್ಲಿಯವರೇಗೂ ಇಂತಹ ಸಾವಿರ ಲೇಖನಗಳನ್ನು ಬರೆದರೂ 'ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ'...

 

                                                                                                       -ಗೋವಿಂದರಾವ್ ಎನ್. ರಾಠೋರ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ