ಆಗಸ್ಟ್ 27, 2024

ಎಐ ಜಗತ್ತು: ಇಂದು ಮತ್ತು ನಾಳೆ

ಜಗತ್ತು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ ಮತ್ತು ತುಂಬಾ ವೇಗವಾಗಿ ಓಡುತ್ತಿದೆ. ಈ ವೇಗದ ಹಾದಿಯಲ್ಲಿ ನಾವೂ ಮುಂದೆ ಓಡಬೇಕೋ ಇಲ್ಲ ಹಿಂದೆ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೆವೆ. ಈ ಗೊಂದಲದ ಮೂಲವೇ "ಎಐ ಜಗತ್ತು". ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಐತಿಹಾಸಿಕ ತಂತ್ರಜ್ಞಾನ. ಇದು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಾಂತಿ ತಂದಿದೆ. ಈ ಕ್ರಾಂತಿ ಪ್ರಗತಿಗೋ ಇಲ್ಲ ಅವನತಿಗೋ ಎಂಬ ಶಂಕೆಯಂತೂ ಖಂಡಿತಾ ಮೂಡಿಸುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಎಐ ಈ ಜಗತ್ತಿನ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆ ಮಾಡುವುದು ಅತೀ ಅಗತ್ಯವಾಗಿದೆ.

ಎಐ ನಮ್ಮ ಜೀವನದಲ್ಲಿ ತಂದ ಬದಲಾವಣೆ

ಎಐ ಬಂದ ನಂತರ, ಮನುಷ್ಯನು ಮಾಡಬೇಕಾದ ಎಲ್ಲಾ ಕೆಲಸವನ್ನು ಅಷ್ಟೇ ಅಲ್ಲ, ಮನುಷ್ಯನು ಮಾಡಲಾಗದ ಕೆಲಸವನ್ನೂ ಕ್ಷಣಾರ್ಧದಲ್ಲಿ ಮಾಡಿ ಬೀಸಾಕುತ್ತಿದೆ. ಉದಾಹರಣೆಗೆ, ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆಯು ಡಯಾಗ್ನೋಸಿಸ್‌ನಲ್ಲಿ ಅತ್ಯಂತ ಪ್ರಮಾಣ ಬದ್ಧತೆಯನ್ನು ತರುತ್ತದೆ. ಇದರಿಂದ ರೋಗಿಗಳ ಜೀವಿತಾವಧಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಎಐ ನಿಯಂತ್ರಣ ವ್ಯವಸ್ಥೆಗಳಲ್ಲಿಯೂ, ತಂತ್ರಜ್ಞಾನದಲ್ಲಿಯೂ ನಮ್ಮ ಬದುಕನ್ನು ಸುಲಭಗೊಳಿಸಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರಿಗೆ ವೈಯಕ್ತಿಕೀಕೃತ ಸೇವೆಗಳನ್ನು ನೀಡಲು, ಎಐ ಆಧಾರಿತ ಆನ್ಲೈನ್ ಶಾಪಿಂಗ್ ಪ್ರಕ್ರಿಯೆಯು ವೇಗವಾಗಿ ಬೆಳೆಯುತ್ತಿದೆ. ಸಿನಿಮಾ, ಕಿರುತೆರೆ, ದ್ವನಿ, ತದ್ರೂಪಿ, ಕಚೇರಿ ಕೆಲಸ, ವ್ಯವಹಾರ, ಬರವಣಿಗೆ, ಮಾರ್ಗದರ್ಶನ ಹೀಗೆ ನೀವು ಏನು ಬೇಕಾದರೂ ಊಹಿಸಬಹುದು. ಕೆಲವೊಮ್ಮೆ ಊಹಿಸಲಾಗದ ಕ್ಷೇತ್ರಕ್ಕೂ ಈ "ಎಐ" ದಾಳಿ ಇಟ್ಟಿದೆ. 

ಎಐಯಿಂದ ಎದುರಾಗುವ ಸವಾಲುಗಳು

ಈ ಎಲ್ಲಾ ಸುಧಾರಣೆಗಳ ಜೊತೆಗೆ ಎಐ ಹಲವು ಸವಾಲುಗಳನ್ನು ನಮ್ಮೆದುರು ತರುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಎಐ ತಾಂತ್ರಿಕತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಇದರಿಂದ ಪರಂಪರಾಗತ ಉದ್ಯೋಗಗಳು ಅಪಾಯಕ್ಕೆ ಈಗಾಗಲೇ ಒಳಗಾಗಿವೆ. ಒಂದು ಬದಿಯಲ್ಲಿ ಎಐ ಉತ್ಪಾದಕತೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತಿದೆ. ಮತ್ತೊಂದು ಬದಿಯಲ್ಲಿ, ಕೃತಕ ಬುದ್ಧಿಮತ್ತೆಯು ಮನುಷ್ಯರ ಅಗತ್ಯವನ್ನು ಕಡಿಮೆಮಾಡುತ್ತಿದೆ. ಮನುಷ್ಯನಿಗೆ ಇದ್ದ ಜ್ಞಾನ, ಅನುಭವ ಮತ್ತು ಶ್ರಮಕ್ಕೆ ತಕ್ಕ ಪ್ರಮಾಣದಲ್ಲಿ ಮೌಲ್ಯ ಇಲ್ಲವಾಗಬಹುದೇ ಎಂಬ ಅನುಮಾನ ಮೂಡಿಸುತ್ತಿದೆ.

ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು, ಎಐ ಬಂದು ತಮ್ಮ ಸ್ಥಾನವನ್ನು ಕಬಳಿಸಿಕೊಳ್ಳಲಿದೆ ಎಂಬ ಆತಂಕದಲ್ಲಿದ್ದಾರೆ. ಈ ಆತಂಕವು ಸ್ವಾಭಾವಿಕವಾದರೂ, ನಮಗೆ ಹೊಸ ಕಾಲಘಟ್ಟದಲ್ಲಿ ಹೆಜ್ಜೆಯಿಡಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಬೇಕಾಗಿದೆ ಎನ್ನುವುದು ಗಮನಿಸಬೇಕಾದ ಅಂಶ ಎನ್ನುವವರೂ ಇದ್ದಾರೆ. ಹೊಸ ರೀತಿಯ ಉದ್ಯೋಗಗಳು, ಅವುಗಳಲ್ಲಿರುವ ಹೊಸ ಸವಾಲುಗಳು, ಮತ್ತು ಕೌಶಲ್ಯಗಳ ಅಗತ್ಯವನ್ನು ಅರಿತುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳುವುದು, ಮುಂದಿನ ಪೀಳಿಗೆಗೆ ಶ್ರೇಯಸ್ಕರ ಎಂದೂ ಹೇಳಲಾಗುತ್ತಿದೆ..

ಭವಿಷ್ಯದಲ್ಲಿ ಏನಾಗಬಹುದು?

ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಕ್ರಿಯೆ ಮುಂದುವರಿದರೆ, ಮನುಷ್ಯರು ಕೇವಲ ತಂತ್ರಜ್ಞಾನದ ಸೇವಕರು ಮಾತ್ರ ಆಗಿ ಬಾಳಬಹುದು. ಆದರೆ, ಇದು ಅಪಾಯಕಾರಿಯೂ ಆಗಬಹುದು. ಮಾನವೀಯ ಹೃದಯ ಬುದ್ದಿಯು ಕಡಿಮೆಗೊಳ್ಳುವ ಭೀತಿ ಕೂಡ ಇದೆ. ತಂತ್ರಜ್ಞಾನದಲ್ಲಿ ಜ್ಞಾನವಿದೆ, ಆದರೆ ಮಾನವೀಯತೆ, ಮಾನವೀಯ ಹೃದಯಬುದ್ದಿ ಎಂಬುದು ಅಲ್ಲಿ ಇಲ್ಲ. ಆದ್ದರಿಂದ, ಎಐ ಮನುಷ್ಯರನ್ನು ಸಂಪೂರ್ಣವಾಗಿ ಪ್ರತಿಸ್ಪರ್ಧಿಸಲಾಗದು. ಆದರೆ, ಈ ಕ್ಷಿಪ್ರಗತಿಯ ಪಥದಲ್ಲಿ ನಾವೆಲ್ಲರೂ ಎಐಯನ್ನು ಸರಿಯಾಗಿ ಬಳಸಿಕೊಂಡು, ಮನುಷ್ಯತ್ವವನ್ನು ಉಳಿಸಿಕೊಳ್ಳಲು ಯತ್ನಿಸಬೇಕಾದ ಗುರುತರ ಜವಾಬ್ದಾರಿ ಹೋರಬೇಕಾಗಿದೆ.

ಎಐ ಪ್ರಬಲವಾಗಿ ನಮ್ಮ ಆರ್ಥಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕ ಬೌದ್ಧಿಕತೆಯನ್ನು ರೂಪಿಸುತ್ತಿರುವುದರಿಂದ, ಮುಂದಿನ ಹತ್ತು ವರ್ಷಗಳಲ್ಲಿ ನಾವು ಹೇಗೆ ಬದುಕಬೇಕು ಎಂಬುದರ ಬಗೆಗೆ ಹೆಚ್ಚು ಯೋಚನೆ ಮಾಡಬೇಕಾಗಿದೆ. ಎಐಯು ನಮ್ಮ ಸಾಧನೆಗಳನ್ನು ಎತ್ತರಕ್ಕೆ ಎತ್ತುವ ಸಾಮರ್ಥ್ಯವಿದ್ದರೂ, ನಾವು ಎಐಯನ್ನು ಎಂತಹ ಮಿತಿಯಲ್ಲಿ ಬಳಸಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ.

ಎಐ ಭಾವಿ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ

ಎಐ ಮುಂದಿನ ತಲೆಮಾರಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಕೇವಲ ಊಹಿಸಬಹುದು. ಶಾಲಾ ಶಿಕ್ಷಣದಿಂದ ಹಿಡಿದು ಉದ್ಯೋಗ ಪ್ರಾಪ್ತಿಯವರೆಗೆ, ಕೌಟುಂಬಿಕ ಸಂಬಂಧಗಳಿಂದ ಹಿಡಿದು ಸಾಮಾಜಿಕ ಜೀವನದವರೆಗೆ, ಎಲ್ಲವನ್ನೂ ಎಐ ಆವರಿಸಿಕೊಳ್ಳಲಿದೆ. ಬಹುಶಃ ನಮ್ಮ ಚಿಂತನೆಗಳು, ನಮ್ಮ ತೀರ್ಮಾನಗಳು, ಮತ್ತು ನಮ್ಮ ಅಭಿಪ್ರಾಯಗಳನ್ನೂ ಸಹ ಎಐ ರೂಪಿಸುತ್ತದೆ‌ಯೋ ಎಂಬ ಆತಂಕವಂತೂ ಇದೆ. ಆ ದಿನಗಳು ಬಹಳ ದೂರವೇನಿಲ್ಲ ಎಂಬ ಭಯ ಈಗಲೇ ಆವರಿಸುತ್ತಿದೆ. 

ಆದರೆ, ನಾವು ಎಐಯನ್ನು ಹಿತಕರವಾಗಿ ಬಳಸಿದರೆ, ಇದು ಮುಂಚಿನ ಯಾವುದೇ ತಂತ್ರಜ್ಞಾನದಂತೆ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ನಾವು ಎಐಯನ್ನು ನಿಯಂತ್ರಣದಲ್ಲಿ ಬಳಸದೆ ಹೋದರೆ, ನಾವು ತಂತ್ರಜ್ಞಾನದ ಬಲೆಗೆ ಸಿಲುಕುವ ಅಪಾಯವಿದೆ ಎನ್ನುವುದನ್ನೂ ತಳ್ಳಿ ಹಾಕುವಂತಿಲ್ಲ. 

ಅಂತಿಮವಾಗಿ...

ಎಐ ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಸುಧಾರಿಸುತ್ತದೆ, ಮತ್ತು ಪರಿಣಾಮಕಾರಿಯಾಗಿಸುತ್ತದೆ ನಿಜ. ಆದರೆ ಅದರೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ಮುಖ್ಯ. ಎಐಯನ್ನು ನಮ್ಮ ನೆರವಿಗೆ ಬಳಸಿಕೊಂಡು, ನಮ್ಮ ಸೃಜನಶೀಲತೆ, ಮಾನವೀಯ ಮೌಲ್ಯಗಳು, ಮತ್ತು ನೆನೆಪಿನ ಶಕ್ತಿ ಉಳಿಸಿಕೊಂಡು ಮುಂದುವರಿಯುವುದು ಜಾಣತನವಾಗಿದೆ. ಅತಿ ಹೆಚ್ಚು ಆಧರಿಸದೆ, ಸಮತೋಲನದಿಂದ ಎಐಯನ್ನು ಬಳಸಿದರೆ, ಈ ತಂತ್ರಜ್ಞಾನವು ನಮ್ಮ ಜೀವನದಲ್ಲಿ ನಿಜವಾದ ಪ್ರಗತಿಯನ್ನು ತರುತ್ತದೆ. 

ಈ ಎಐ ಜಗತ್ತಿನಲ್ಲಿ, ನಾವು ಪಶ್ಚಾತ್ತಾಪದಿಂದ ಬದುಕಬೇಕೋ ಅಥವಾ ಪ್ರಗತಿಯಲ್ಲಿ ಮುನ್ನುಗ್ಗಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ. ನಾವು ಈ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡುತ್ತೇವೆ ಎಂಬುದು ಮಾತ್ರವೇ ಈ ತಂತ್ರಜ್ಞಾನ ನಮಗೆ ಆನಂದವನ್ನೇ ತರಬಲ್ಲದೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.


ಆಗಸ್ಟ್ 25, 2024

ಅರಳಗುಂಡಗಿಯ ಸಂತ ಶ್ರೀ ಶರಣಬಸವ


ಶರಣರ ಬೀಡು, ದೈವತ್ವದ ಪೂಣ್ಯಭೂಮಿ ಈ ಕಲ್ಯಾಣ ಕರ್ನಾಟಕ. ಈ ಕರುನಾಡಿನ ನೆಲದಲ್ಲಿ ಜನಿಸಿದ ಅಸಂಖ್ಯ ಮಹಾತ್ಮರು ಇಡೀ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಅಂಥವರಲ್ಲಿ ಒಬ್ಬರು "ಅರಳಗುಂಡಗಿಯ ಸಂತ ಶ್ರೀ ಶರಣಬಸವ."

ಶ್ರೀ ಶರಣಬಸವೇಶ್ವರರು, ಕ್ರಿ.ಶ 1746ರಲ್ಲಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಮಲಕಪ್ಪಾ ಮತ್ತು ತಾಯಿ ಸಂಗಮ್ಮ, ಜ್ಞಾನ ಮತ್ತು ಭಕ್ತಿ ತುಂಬಿದ ಪಿತೃಗಳು.

ಶರಣಬಸವೇಶ್ವರರ ದಾಸೋಹ ಕಾಯಕ:

ಶರಣಬಸವೇಶ್ವರರು ಕಾಯಕ, ದಾಸೋಹ, ಮತ್ತು ಲಿಂಗಾಯತ ತತ್ವಗಳ ಬೋಧನೆ ಮಾಡಿ, ಜನತೆಗೆ ಹೊಸ ಬದುಕಿನ ದಾರಿ ತೋರಿಸಿದರು. ಅಧ್ಯಾತ್ಮದ ಕಡೆಗೆ ಅವರ ಒಲವು ಬಾಲ್ಯದಿಂದಲೇ ಸ್ಪಷ್ಟವಾಗಿದ್ದು, ಕಲಿಕೆಯ ಹಾದಿಯಲ್ಲಿ, ಓಂ ಕಾರದ ಮಹಾತತ್ವದ ಪ್ರಶ್ನೆಯಿಂದ ಆರಂಭಿಸಿದ ಇವರ ಜೀವನ, ಅಧ್ಯಾತ್ಮಿಕ ಶೋಧನೆಯಾದರು.

ಶರಣಬಸವೇಶ್ವರರು ಹಾಗೂ ಅವರ ಗೃಹಸ್ಥ ಜೀವನ:

ಶರಣಬಸವೇಶ್ವರರು ಮಹಾದೇವಿ ಎಂಬವರನ್ನು ಮದುವೆಯಾಗಿದ್ದು, ಸಾಂಸಾರಿಕ ಜೀವನದಲ್ಲಿಯೂ ದಾಸೋಹ, ಲಿಂಗಪೂಜೆ, ಬಡವರಿಗೆ ಸೇವೆಗಳಲ್ಲಿ ತೊಡಗಿದರು. ಅವರದು ಅವಿಭಕ್ತ ಕುಟುಂಬವಾಗಿದ್ದು, ಶರಣಬಸವೇಶ್ವರರ ದಾಸೋಹ ಕಾಯಕಕ್ಕಾಗಿ, ಅವರು ಆಸ್ತಿಯಿಂದ ದೂರವಿದ್ದು, ತಮ್ಮ ಮಾರ್ಗದಲ್ಲಿ ಮುಂದುವರಿದರು.

ಪ್ರಕೃತಿಯನ್ನು ಪ್ರೀತಿಸಿ, ಬದುಕನ್ನು ಸುಧಾರಿಸಿದ ದಾರಿಹೋಕ:

ಶರಣಬಸವೇಶ್ವರರು ಕಾಯಕದಲ್ಲಿ ಹಕ್ಕಿಗಳನ್ನು ಕಾಡದಂತೆ ಬೆಳೆಗಳಿಗೆ ಅವುಗಳಿಂದಲೇ ಇಳುವರಿ ಹೆಚ್ಚಿಸಿದರು. ಗಿಡದಿಂದ ಉದುರಿ ಬಿದ್ದ ಹೂವುಗಳು, ಎಲೆಗಳು ಮತ್ತು ಹಕ್ಕಿಗಳ ಸಹಾಯದಿಂದ ತಮ್ಮ ಕೃಷಿಯನ್ನು ಯಶಸ್ವಿಯಾಗಿ ನಡೆಸಿದರು. ಅವರ ಈ ಕಾಯಕವು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತದೆ.

ಹಸಿವಿನಿಂದ ಬಳಲಿದ ಹಸಿದ ಜನರಿಗೆ ದಾಸೋಹ:

ಶರಣಬಸವೇಶ್ವರರು, ಹಸಿವಿನಿಂದ ಬಳಲಿದ ಜನರಿಗೆ ಅನ್ನ ದಾಸೋಹ, ಆರೋಗ್ಯ ಸಮಸ್ಯೆಗಳಿಂದ ಬಳಲಿದವರಿಗೆ ಔಷಧ ಮತ್ತು ದೈವಿಕ ಶಕ್ತಿ ನೀಡಿದರು. ಅವರ ದಾಸೋಹ ಪರಂಪರೆ, ಶಿವಾನುಭವ ಮತ್ತು ಬೋಧನೆಗಳಿಂದ, ಕಳ್ಳರು ಮತ್ತು ವಂಚಕರು ಸಹ ತಮ್ಮ ದುರಾಚರಣೆಗಳಿಂದ ಹೊರಬಂದು ಶರಣರಾದರು.

ಮಹಾದಾಸೋಹಿ ಶರಣಬಸವೇಶ್ವರರ ಪಯಣ:

ಅವರ ಮಡದಿ ಮತ್ತು ಮಗನ ಅಕಾಲಿಕ ಸಾವು ಬಳಿಕ, ಶರಣಬಸವೇಶ್ವರರು ಕಲಬುರಗಿಗೆ ಪಯಣ ಬೆಳೆಸಿದರು. ಬಡವರಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಅವರು, ದಾರಿಯಲ್ಲಿದ್ದ ಹಳ್ಳಿಗಳಲ್ಲಿ ಜನರಿಗೆ ಆಹಾರ, ನೀರು, ಮತ್ತು ಆಶ್ರಯವನ್ನು ಒದಗಿಸಿದರು.

ಶರಣಬಸವೇಶ್ವರರ ಶಿವಾನುಭವದ ಗೋಷ್ಟಿ:

ಕಲಬುರಗಿಯಲ್ಲಿ, ದೊಡ್ಡಪ್ಪಗೌಡರು ಶರಣಬಸವೇಶ್ವರರಿಗೆ ಆಶ್ರಯ ನೀಡಿದ್ದು, ಅವರು ನಿರಂತರವಾಗಿ ಶಿವಾನುಭವದ ಗೋಷ್ಟಿಗಳನ್ನು ನಡೆಸಿ, ಲಿಂಗಾಯತ ತತ್ವಗಳನ್ನು ಪ್ರಸಾರ ಮಾಡಿದರು. ಶಿವಾನುಭವದ ಮೂಲಕ ಜನರಲ್ಲಿ ಜ್ಞಾನವನ್ನೂ, ಆಧ್ಯಾತ್ಮಶಕ್ತಿಯನ್ನೂ ತುಂಬಿದರು.

ಶರಣಬಸವೇಶ್ವರರ ಲಿಂಗೈಕ್ಯ:

1822ರ ಮಾರ್ಚ್ ಹನ್ನೊಂದನೇ ತಾರೀಖು ಸೋಮವಾರದಂದು, ಶ್ರೀ ಶರಣಬಸವೇಶ್ವರರು ಲಿಂಗೈಕ್ಯರಾದರು. ಅವರ ಸಮಾಧಿಯ ಮೇಲೆ ನಿರ್ಮಿತ ಗೋಪುರ, ಇಂದಿನ ಶರಣಬಸವೇಶ್ವರ ದೇವಸ್ತಾನವಾಗಿ, ಹಲವಾರು ಭಕ್ತರಿಗೆ ಆಧ್ಯಾತ್ಮಿಕ ಶ್ರದ್ಧೆಯ ಕೇಂದ್ರವಾಗಿದೆ. 

ಶರಣಬಸವೇಶ್ವರರ ಮಹತ್ವ:

ಶರಣಬಸವೇಶ್ವರರು, ಕಾಯಕ ಮತ್ತು ದಾಸೋಹದ ಮೂಲಕ, ತಮ್ಮ ಜೀವನವನ್ನು ಸಮಾಜದ ಶ್ರೇಯಸ್ಸಿಗಾಗಿ ತೊಡಗಿಸಿ, ಮೌನವಾಗಿ ತಮ್ಮ ಜೀವನತತ್ವವನ್ನು ಅನುಸರಿಸಿ ತೋರಿಸಿದರು. ಅವರು ಹೇಗೆ ಶಿವನನ್ನು ಕಂಡುಕೊಳ್ಳಬೇಕು ಎಂಬ ಸಂದೇಶವನ್ನು, ನಿಸ್ವಾರ್ಥವಾಗಿ ಬೋಧಿಸಿದರು. 

ಶರಣಬಸವೇಶ್ವರ ರತೋತ್ಸವ:

ಪ್ರತಿವರ್ಷ, ಶರಣಬಸವೇಶ್ವರರ ಲಿಂಗೈಕ್ಯ ದಿನದಂದು, ಅವರ ದಾಸೋಹವನ್ನು ನೆನಪಿಸಲು ರತೋತ್ಸವ ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ. 

ಅಪಾರ ಪ್ರೇರಣೆ:

ಶರಣಬಸವೇಶ್ವರರ ಜೀವನದ ಪ್ರಸಂಗಗಳು, ಮೌಲಿಕ ತತ್ವಗಳು, ಅವರ ದಾಸೋಹ ಕಾರ್ಯಗಳು, ಇಂದಿಗೂ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿವೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರು, ತಮ್ಮ ಜೀವನ ಮತ್ತು ಕಾಯಕದ ಮೂಲಕ, ಸಮಾಜದ ಬದಲಾವಣೆಗೆ ಮತ್ತು ಆಧ್ಯಾತ್ಮಿಕ ಶ್ರೇಯಸ್ಸಿಗೆ ಮಾಡಿದ ಕೊಡುಗೆ, ನಮ್ಮೆಲ್ಲರಿಗೂ ಅಪಾರ ಪ್ರೇರಣೆಯ ಮೂಲವಾಗಿದೆ.

ಅರಳಗುಂಡಗಿಯ ಸಂತ ಶ್ರೀ ಶರಣಬಸವ ಕುರಿತು ಸಾಕ್ಷ್ಯಚಿತ್ರ ನೋಡಲಿ ಕ್ಲಿಕ್ಕಿಸಿ.